ಬಿ.ಚ್.ಕೈಮರದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಮಿಶ್ರ ತಳಿ ಕರು - ಹಸುಗಳ ಪ್ರದರ್ಶನ
ಅನುಗ್ರಹ ಯೋಜನೆಯಡಿ ಹಸು ಸತ್ತರೆ ಸರ್ಕಾರದಿಂದ ₹10 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಪ್ರೀತಂ ಕುಮಾರ್ ತಿಳಿಸಿದರು.
ಭಾನುವಾರ ಬಿ.ಎಚ್.ಕೈಮರದಲ್ಲಿ ಪಶು ಪಾಲನಾ ಇಲಾಖೆ ಹಾಗೂ ಬಿ.ಎಚ್.ಕೈಮರ ಹಾಲು ಉತ್ಪಾದಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಮಿಶ್ರ ಕರು ಹಾಗೂ ಹಸುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.6 ತಿಂಗಳ ಒಳಗಿನ ಮೇಕೆ ಸತ್ತರೆ 3 ಸಾವಿರ, 6 ತಿಂಗಳ ಮೇಲ್ಪಟ್ಟ ಕುರಿ, ಮೇಕೆಗಳು ಸತ್ತರೆ ₹5 ಸಾವಿರ ರುಪಾಯಿ ನೀಡಲಾಗುವುದು. ಅಲ್ಲದೆ ಹಸು, ಎಮ್ಮೆಗಳಿಗೆ ಕಾಲುಬಾಯಿ ಜ್ವರ,ಚರ್ಮ ಗಂಟು ರೋಗಗಳಿಗೆ ಉಚಿತ ಲಸಿಕೆ ನೀಡಲಾಗುವುದು. ಕಂದು ರೋಗಕ್ಕೆ ಲಸಿಕೆ, ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆ ನೀಡಲಾಗುವುದು. ಕೋಳಿಗಳ ಶೀತ ಜ್ವರಕ್ಕೆ ಹಾಗೂ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುವುದು ಎಂದರು.
ಕೆಡಿಪಿ ಸದಸ್ಯ ಹಾಗೂ ಗುಬ್ಬಿಗಾ ಗ್ರಾಪಂ ಸದಸ್ಯ ಕೆ.ವಿ.ಸಾಜು ಉದ್ಘಾಟಿಸಿ ಮಾತನಾಡಿ, ಪಶು ಇಲಾಖೆ ಇಂತಹ ಕಾರ್ಯಕ್ರಮ ಏರ್ಪಡಿಸುವುದರಿಂದ ರೈತರಿಗೆ ಹಸು ಸಾಕಲು ಉತ್ತೇಜನ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳ ಸಾಕಾಣಿಕೆ ಕಷ್ಟವಾಗುತ್ತಿದೆ. 1962 ರ ತುರ್ತು ವಾಹನದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಚಿಕಿತ್ಸೆ ಅಗತ್ಯ ಇರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು. 40- 50 ಜಾನುವಾರುಗಳ ಪ್ರದರ್ಶನ ಏರ್ಪಡಿಸಿ ಇದರಲ್ಲಿ ಭಾಗವಹಿಸಿದ್ದ ಎಲ್ಲಾ ಜಾನುವಾರುಗಳ ಮಾಲೀಕರಿಗೆ ಮಿನ್ಟೂರಲ್ ಮಿಕ್ಸರ್, ಹಾಲಿನ ಕ್ಯಾನು, ಕ್ಯಾಲ್ಸಿಯಂ ಲಿಕ್ವಿಡ್, ಹೇನಿನ ಮತ್ತು ಗಾಯದ ಔಷಧಿ,, ಮಿನುರಲ್ ಟ್ಯಾಬ್ಲೇಟ್, ಆಯಿಂಟ್ ಮೆಂಟ್, ಬೇವಿನ ಎಣ್ಣೆಯನ್ನು ಉಚಿತವಾಗಿ ನೀಡಲಾಯಿತು.