ಡಾ. ಅನಘಾ ನಿಡುಗಾಲಗೆ ಡಾ. ಗೋವಿಂದರಾಜುಲು ಸ್ಮಾರಕ ಸ್ವರ್ಣ ಪದಕ

KannadaprabhaNewsNetwork | Published : Nov 6, 2024 11:48 PM

ಸಾರಾಂಶ

ಕನ್ನಡ ಪಂಡಿತರ ಪುತ್ರ ಡಾ.ಶ್ಯಾಮ್‌ಕುಮಾರ್ ಎನ್.ಕೆ ನಿಡುಗಾಲ ಮತ್ತು ಡಾ.ಅಪರ್ಣಾ ಶ್ಯಾಮ್‌ಕುಮಾರ್ ಅವರ ಪುತ್ರಿ.ಡಾ.ಶ್ಯಾಮ್ ಕುಮಾರ್ ಅವರು ಸುಬ್ರಹ್ಮಣ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಪೂರೈಸಿ ಬಳಿಕ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿಪೂರ್ವ ವ್ಯಾಸಂಗ ಪೂರೈಸಿದವರು. ಪ್ರಸ್ತುತ ವೆಲ್ಲೂರಿನ ಸಿಎಂಸಿ ಮೆಡಿಕಲ್ ಇನ್‌ಸ್ಟಿಸ್ಟೂಷನ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಮೂಲತಃ ಕುಕ್ಕೆ ಸುಬ್ರಹ್ಮಣ್ಯದ ಅಗ್ರಹಾರದ ನಿಡುಗಾಲ ನಿವಾಸಿಯಾಗಿದ್ದು ಪ್ರಸ್ತುತ ತಮಿಳುನಾಡಿನ ವೆಲ್ಲೂರಿನಲ್ಲಿರುವ ಡಾ.ಅನಘಾ ನಿಡುಗಾಲ ಶ್ಯಾಮ್‌ಕುಮಾರ್ ಅವರಿಗೆ ತಮಿಳುನಾಡು ಎಂ.ಜಿ.ಆರ್ ಮೆಡಿಕಲ್ ವಿಶ್ವವಿದ್ಯಾಲಯ ಕೊಡ ಮಾಡುವ ಪ್ರತಿಷ್ಠಿತ ಡಾ.ಗೋವಿಂದರಾಜುಲು ಸ್ಮಾರಕ ಚಿನ್ನದ ಪದಕ ಲಭಿಸಿದೆ

ಪುರಸ್ಕಾರದ ಪ್ರಮಾಣ ಪತ್ರ ಮತ್ತು ಚಿನ್ನದ ಪದಕವನ್ನು ಎಂಜಿಆರ್ ವಿವಿಯ 37ನೇ ಘಟಿಕೋತ್ಸವದಲ್ಲಿ ತಮಿಳುನಾಡಿನ ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ರವಿ ಅವರು ಪ್ರಧಾನ ಮಾಡಿದರು. ಈ ಸಂದರ್ಭ ಉಪಕುಲಪತಿ ಡಾ.ನಾರಾಯಣ ಸ್ವಾಮಿ, ಚಂಡಿಗಡ್‌ನ ಪಿಜಿಐನ ನಿರ್ದೇಶಕ ಪ್ರೊ. ಡಾ. ವಿವೇಕ್ ಲಾಲ್ ಉಪಸ್ಥಿತರಿದ್ದರು.

ಎಂಬಿಬಿಎಸ್ ಎಲ್ಲಾ ಪರೀಕ್ಷೆಗಳಲ್ಲಿ ಪ್ರಥಮದ ಸಾಧನೆ: ಡಾ.ಅನಘ ಅವರು ತಮಿಳುನಾಡಿನ ಎಂ.ಜಿ.ಆರ್ ವಿಶ್ವವಿದ್ಯಾಲಯದ ವೆಲ್ಲೂರು ಸಿ.ಎಂ.ಸಿ ಮೆಡಿಕಲ್ ಇನ್‌ಸ್ಟಿಸ್ಟೂಷನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ಇದೀಗ ಅಂತಿಮ ಎಂಬಿಬಿಎಸ್ ಪರೀಕ್ಷೆ ಬರೆದು ಅತ್ಯಧಿಕ ಅಂಕದೊಂದಿಗೆ ರ‍್ಯಾಂಕ್‌ನೊಂದಿಗೆ ತೇರ್ಗಡೆಹೊಂದಿದ್ದಾರೆ. ಎಂಜಿಆರ್ ವಿವಿಯ 37ನೇ ಘಟಿಕೋತ್ಸವದಲ್ಲಿ ಡಾ.ಅನಘ ಅವರು ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷೆಯಿಂದ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯ ತನಕ ನಡೆದ ಎಲ್ಲ ವರ್ಷದ ಅಂತಿಮ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗೊಂದಿಗೆ ವಿವಿಗೆ ಪ್ರಥಮ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಈ ವೈಶಿಷ್ಟ್ಯಪೂರ್ಣ ಸಾಧನೆಗಾಗಿ ಡಾ. ಅನಘ ಅವರಿಗೆ ಪ್ರತಿಷ್ಠಿತ ಡಾ.ಗೋವಿಂದರಾಜುಲು ಸ್ಮಾರಕ ಚಿನ್ನದ ಪದಕ ಲಭಿಸಿದೆ. ಎಂಬಿಬಿಎಸ್ ಬಳಿಕ ಇದೀಗ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಲತಃ ಕುಕ್ಕೆಯವರು: ವೆಲ್ಲೂರಿನ ಸಿಎಂಸಿ ಇನ್‌ಸ್ಟಿಟ್ಯೂಷನ್‌ನಲ್ಲಿ ವ್ಯಾಸಂಗ ಮಾಡಿ ಸಾಧನೆಯ ಶ್ರೇಷ್ಠತೆ ಮೆರೆದ ಡಾ.ಅನಘ ಅವರು ಮೂಲತಃ ಕುಕ್ಕೆ ಸುಬ್ರಹ್ಮಣ್ಯದವರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಸುಬ್ರಹ್ಮಣ್ಯದ ಅಗ್ರಹಾರದ ವಿದ್ವಾನ್ ಕೇಶವ ಭಟ್ ನಿಡುಗಾಲ ಅವರ ಮೊಮ್ಮಗಳು. ಕನ್ನಡ ಪಂಡಿತರ ಪುತ್ರ ಡಾ.ಶ್ಯಾಮ್‌ಕುಮಾರ್ ಎನ್.ಕೆ ನಿಡುಗಾಲ ಮತ್ತು ಡಾ.ಅಪರ್ಣಾ ಶ್ಯಾಮ್‌ಕುಮಾರ್ ಅವರ ಪುತ್ರಿ.ಡಾ.ಶ್ಯಾಮ್ ಕುಮಾರ್ ಅವರು ಸುಬ್ರಹ್ಮಣ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಪೂರೈಸಿ ಬಳಿಕ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿಪೂರ್ವ ವ್ಯಾಸಂಗ ಪೂರೈಸಿದವರು. ಪ್ರಸ್ತುತ ವೆಲ್ಲೂರಿನ ಸಿಎಂಸಿ ಮೆಡಿಕಲ್ ಇನ್‌ಸ್ಟಿಸ್ಟೂಷನ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದಾರೆ.

Share this article