ಕನ್ನಡಪ್ರಭ ವಾರ್ತೆ ಚಾಮರಾಜನಗರನಾಯಕ ಸಮುದಾಯದ ಬಹು ವರ್ಷಗಳ ಬೇಡಿಕೆಯಾದ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದ ಜಿಲ್ಲಾಡಳಿತ ಮಾಡುವ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಅ.17 ರಂದು ಸಮುದಾಯದಿಂದಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಿಸಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಮುದಾಯದ ಮುಖಂಡರಿಂದಲೇ ವಾಲ್ಮೀಕಿ ಪುತ್ಥಳಿಗೆ ಭೂಮಿಪೂಜೆ ಮಾಡಲಾಗುತ್ತದೆ ಎಂದು ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸ ನಾಯಕ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ಜಿಲ್ಲಾ ಮಟ್ಟದ ನಾಯಕ ಸಮುದಾಯದ ಮುಖಂಡರ ಸಭೆ ಸೇರಿ ಒಕ್ಕೊರಲಿನಿಂದ ನಿರ್ಣಯ ಕೈಗೊಂಡ ಸರ್ಕಾರ, ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸದ ಕಾರಣದಿಂದ ಸರ್ಕಾರಿ ಜಿಲ್ಲಾ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮಗಳನ್ನು ಬಹಿಷ್ಕಾರ ಮಾಡಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯದ ವತಿಯಿಂದಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆ, ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿಪೂಜೆಗೆ ತೀರ್ಮಾನಿಸಲಾಗಿದ್ದು ಅದರಂತೆ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆ, ವಾಲ್ಮೀಕಿ ಪುತ್ಥಳಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಲಿದ್ದಾರೆ ಎಂದರು.ನಗರದ ಪ್ರವಾಸಿಮಂದಿರದಿಂದ ಕಲಾತಂಡಗಳೊಂದಿಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅಲ್ಲಿಂದ ಹೊರಟು ದೊಡ್ಡಂಗಡಿ, ಚಿಕ್ಕಂಗಡಿ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ಜೋಡಿರಸ್ತೆಯ ಮೂಲಕ ನಗರದ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ತೆರಳಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಮಹದೇವನಾಯಕ ಬಿ.ಕಾಂ, ನಗರಸಭಾ ಮಾಜಿ ಸದಸ್ಯ ರಾಜೇಶನಾಯಕ, ಜಯಸುಂದರ್, ವಿರಾಟ್ ಶಿವು, ವೆಂಕಟರಮಣನಾಯಕ ಹಾಜರಿದ್ದರು.