ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ೮ ಕೋಟಿ ರು.ಗಳ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು.ಗೌಡಳ್ಳಿ, ಚಿಕ್ಕಾರ, ಕೂಗೂರು ಮಾರ್ಗದ ಚಿಕ್ಕಾರ ಗ್ರಾಮದ ರಸ್ತೆಯಲ್ಲಿ ನಿರ್ಮಿಸಿರುವ ೬೦ಲಕ್ಷ ರು,ಗಳ ವೆಚ್ಚದ ಸೇತುವೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನನ್ನ ಅಧಿಕಾರವಧಿಯಲ್ಲಿ ಮುಂದೆಯೂ ಹೆಚ್ಚಿನ ಅನುದಾನ ನೀಡಲಾಗುವುದು. ಗ್ರಾಮೀಣಾಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಕಾಣಬೇಕಾಗಿದೆ. ಅನ್ನದಾತನೆ ದೇಶದ ಬೆನ್ನೆಲುಬು, ಕೃಷಿಕರಿಗೆ ಅವಶ್ಯಕವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಯ ಪಟ್ಟಿಯನ್ನು ತಯಾರಿಸಿಕೊಂಡು, ಸರ್ಕಾರದಿಂದ ಅನುದಾನ ತರುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭ ಚಿಕ್ಕಾರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸುನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಹಿರಿಯ ಕಾಂಗ್ರೆಸಿಗ ಕೂಗೂರು ಜಯಪ್ಪ, ಕಾಂಗ್ರೆಸ್ನ ಪ್ರಮುಖರಾದ ಲೋಕೇಶ್ ಕುಮಾರ್, ಸುರೇಶ್, ಪ್ರಸಾದ್, ವಸಂತ್ ಕುಮಾರ್, ಲಾರೆನ್ಸ್, ಚೇತನ್, ಅಬ್ದುಲ್ ರಜಾಕ್, ಗೌಡಳ್ಳಿ ಮಹೇಶ್, ಸುಮಂತ್, ಆಶೋಕ್, ವೆಂಕಟೇಶ್, ರಾಮಚಂದ್ರ ಮತ್ತಿತರರು ಇದ್ದರು.