ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಡೋಣಿ ನದಿ ತೀರದಲ್ಲಿ ಪ್ರವಾಹದಿಂದ ಜಲಾವೃತವಾದ ತಾಲೂಕಿನ ಯಾಳವಾರ ಗ್ರಾಮದ ಹತ್ತಿರ ಇರುವ ಸೇತುವೆ ಹಾಗೂ ಸಾತಿಹಾಳ ಸೇತುವೆಗೆ ಜಿಪಂ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು.ತಾಲೂಕಿನ ಸಾತಿಹಾಳ ಹಾಗೂ ಯಾಳವಾರ ಗ್ರಾ.ಪಂಗೆ ಬುಧವಾರದಂದು ವಿಜಯಪುರ ಜಿಪಂ ಸಿಇಒ ರಿಷಿ ಆನಂದ ಭೇಟಿ ನೀಡಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿ ತುಂಬಿ ಹರಿಯುತ್ತಿದ್ದು ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಳ್ಳಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ ಸೇತುವೆ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿ ಎಂದು ಎ.ಇ.ಆರ್.ಎನ್ ಅಧಿಕಾರಿಗಳ ಎಚ್.ಎಮ್. ಸಾರವಾಡ ಅವರಿಗೆ ಹೇಳಿದರು.
ಈ ವರ್ಷ ಅತೀ ಹೆಚ್ಚು ಮಳೆ ಆಗುವ ನಿರೀಕ್ಷೆ ಇರುವುದರಿಂದ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಮಣ್ಣಿನ ಮನೆ ಹಾಗೂ ಶಿಥಿಲಗೊಂಡ ಮನೆಗಳನ್ನು ಮನೆಯ ಸದಸ್ಯರನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಹೇಳಿದರು.ನಂತರ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳ ಜೊತೆ ಮಾತನಾಡಿ, ಮಳೆಯಿಂದಾಗಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದನ್ನು ತಾವೆಲ್ಲರೂ ಸೇರಿ ಮಾಡಬೇಕು ಎಂದು ಹೇಳಿದರು.
ತದನಂತರ ಯಾಳವಾರ ಗ್ರಾಮದ ಸೇತುವೆಗೆ ಭೇಟಿ ನೀಡಿ ಅತೀ ಹೆಚ್ಚಾಗಿ ಮಳೆ ಆದ ಸಂದರ್ಭದಲ್ಲಿ ಗ್ರಾಮಸ್ಥರು ಸೇತುವೆಯಲ್ಲಿ ಸಂಚಾರ ಮಾಡದಂತೆ ನೋಡಿಕೊಳ್ಳಬೇಕು. ಇದರಿಂದಾಗುವ ಅನಾಹುತಗಳನ್ನು ಮುಂಜಾಗ್ರತ ಕ್ರಮ ಕೈಗೊಂಡು ಜಿಲ್ಲಾ ಪಂಚಾಯಿತಿಗೆ ವರದಿ ನೀಡಬೇಕು ಎಂದು ಯಾಳವಾರ ಗ್ರಾ.ಪಂ ಪಿಡಿಓ ಮಲ್ಲು ಮಸಳಿ ಅವರಿಗೆ ಸೂಚಿಸಿದರು.ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಶಿಥಿಲಗೊಂಡ ಕೊಠಡಿಗಳನ್ನು ದುರಸ್ತಿ ಮಾಡಬೇಕು. ಅಪಾಯದಲ್ಲಿರುವ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬಾರದು ಎಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರಿಗೆ ಸೂಚಿಸಿದರು.
ನಂತರ ದೇವರಹಿಪ್ಪರಗಿ ಪಟ್ಟಣದ ತಾಲೂಕ ಪಂಚಾಯಿತಿಗೆ ಭೇಟಿ ನೀಡಿ ತಾಪಂ ಹಳೆಯ ಪ್ರವಾಸಿ ಮಂದಿರದಲ್ಲಿ ತಾಲೂಕು ಪಂಚಾಯತ ಕಚೇರಿಯನ್ನು ಹೊಂದಿದ್ದು, ಈ ಕಟ್ಟಡ ಹಳೆಯದಾಗಿದೆ. ಹೊಸ ತಾಲೂಕು ಪಂಚಾಯಿತಿ ಸ್ಥಳಾವಕಾಶಕ್ಕೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಅವರಿಗೆ ಸೂಚಿಸಿದರು.ಪ್ರತಿ ಶನಿವಾರ ತಾಲೂಕ ಪಂಚಾಯಿತಿ ಸ್ವಚ್ಛತಾ ದಿನವನ್ನಾಗಿ ಆಚರಿಸಿ ತಾಲೂಕು ಪಂಚಾಯಿತಿ ಆವರಣವನ್ನು ಶುಚಿತ್ವದಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ,ಅಗ್ನಿ, ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ ಶಿವಾನಂದ ಮೂಲಿಮನಿ, ಎ.ಇ.ಆರ್.ಎನ್.ಎಸ್ ಅಧಿಕಾರಿಗಳಾದ ಎಚ್. ಎಮ್. ಸಾರವಾಡ,ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ,ಪಿ.ಆರ್.ಇ. ಡಿ. ಎಇಇ ಗಳಾದ ಜಿ. ವಾಯ್.ಮುರಾಳ, ಐ.ಇ.ಸಿ ಸಂಯೋಜಕ ಸಿದ್ದು ಕಾಂಬಳೆ, ಸಾತಿಹಾಳ ಪಿಡಿಒ, ಎಂ.ಎನ್. ಕತ್ತಿ, ಯಾಳವಾರ ಪಿಡಿಒ ಮಲ್ಲು ಮಸಳಿ ಸೇರಿದಂತೆ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.