ಸರ್ಕಾರಿ ಆಸ್ಪತ್ರೆಗೆ ಜಿಪಂ ಸಿಇಒ ಭೇಟಿ

KannadaprabhaNewsNetwork | Published : Nov 13, 2024 12:09 AM

ಸಾರಾಂಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಸಂಜೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಭೇಟಿ ನೀಡಿ ಇಲಾಖೆಗಳ ಮಾಹಿತಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಸಂಜೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಭೇಟಿ ನೀಡಿ ಇಲಾಖೆಗಳ ಮಾಹಿತಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದು, ಆರೋಗ್ಯ ಇಲಾಖೆಯ ಯೋಜನೆಗಳು, ರೋಗಿಗಳ ಚಿಕಿತ್ಸೆ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಬಳಿಕ ಔಷಧ ಮಳಿಗೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ಸಾರ್ವಜನಿಕರಿಂದ ಹಣ ಪಡೆದು ಔಷಧ ವಿತರಣೆ ಮಾಡಬಾರದು. ಬಡರೋಗಿಗಳಿಗೆ ಹೊರಗಡೆ ಔಷಧ ತರುವಂತೆ ಚೀಟಿ ನೀಡಬಾರದೆಂದು ತಾಕೀತು ಮಾಡಿದರು. ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಯಾರಾದರೂ ವೈದ್ಯರು ಹಣವನ್ನು ಪಡೆಯುತ್ತಾರಾ ಎಂದು ಕೇಳಿದಾಗ ಸಾರ್ವಜನಿಕರು ಇಲ್ಲ ಸರ್, ರೇಶನ್ ಕಾರ್ಡ್ ಇದ್ದರೆ ಸಾಕು ಎಲ್ಲ ಸೌಲಭ್ಯ ಕೊಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ರೋಗಿಗಳಿಗೆ ಸ್ಪಂದಿಸಿ:

ಪಟ್ಟಣ ಆಸ್ಪತ್ರೆ ಸೇರಿದಂತೆ ಪಿಎಚ್‌ಸಿ, ಸಿಎಚ್‌ಸಿಗಳಿಗೆ ಬರುವ ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ಎಚ್ಚರಿಕೆ ನೀಡಿದರು.

ಅಗತ್ಯ ಸೌಲಭ್ಯ ನೀಡಿ:

ತಾಲೂಕಿನ ಆಸ್ಪತ್ರೆಗಳಿಗೆ ತಾಪಂ ಅನುದಾನ ಬಳಕೆ ಮಾಡಿಕೊಂಡು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಇಒ ಸಂತೋಷ ಬಿರಾದಾರಗೆ ಸೂಚನೆ ನೀಡಿದರು.

ಹೆಚ್ಚುವರಿ ಆ್ಯಂಬುಲೆನ್ಸ್ ಅಗತ್ಯ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಆ್ಯಂಬುಲೆನ್ಸ್ ಸೇವೆ ಅವಶ್ಯಕತೆ ಇದೆ. ಸರ್ಕಾರದಿಂದ ಮಂಜೂರು ಮಾಡಿಸುವಂತೆ ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಹೊಟ್ಟಿ ಸಿಇಒಗೆ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ತಿಳಿಸಿದರು.

ಟಿಎಚ್ ಒ ಅಮರೇಶ ನಾಗರಾಳ ಇಲಾಖೆ ಮಾಹಿತಿ ನೀಡಿದರು.

ನಂತರ ಸಿಇಒ ಹೆರಿಗೆ ಕೊಠಡಿ, ಐಸಿಯು, ಜನರಲ್ ಬೆಡ್ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ತಹಶೀಲ್ದಾರ ಬಸವರಾಜ ತೆನ್ನಳ್ಳಿ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ಚಂದ್ರಶೇಖರ ಅಣ್ಣಗೇರಿ, ಸಂಗಪ್ಪ ಕುರಿ ಸೇರಿದಂತೆ ವೈದ್ಯರು, ಸಿಬ್ಬಂದಿ ಇದ್ದರು.

Share this article