ಕನ್ನಡಪ್ರಭ ವಾರ್ತೆ ದಾವಣಗೆರೆ
ಜಮೀನು ತಮ್ಮದೇ ಆದರೂ ವಸತಿ ಉದ್ದೇಶಕ್ಕೆ ಭೂ ಪರಿವರ್ತಿಸಿಕೊಂಡು ಮನೆ ಕಟ್ಟಿಕೊಳ್ಳುವವರಿಗೆ ಮಾತ್ರ ವಿದ್ಯುತ್ ಸಂಪರ್ಕವೆಂಬ ಸರ್ಕಾರದ ಕಾನೂನನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಸ್ವಗ್ರಾಮ ಕಾರಿಗನೂರಿನಲ್ಲಿ ಸ್ವತಃ ಗ್ರಾಪಂ ಅಧ್ಯಕ್ಷರು, ಸದಸ್ಯರೇ ಮುಂದೆ ನಿಂತು, ಲ್ಯಾಡರ್ ತರಿಸಿಕೊಂಡು ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.ಚನ್ನಗಿರಿ ತಾ.ಕಾರಿಗನೂರು ಗ್ರಾಮದ ವಾಸಿ, ರೈತ ಹಳ್ಳಿ ಶಾಂತಪ್ಪ ಎಂಬುವರ ಮನೆಗೆ ಸ್ವತಃ ಗ್ರಾಪಂ ಅಧ್ಯಕ್ಷರು, ಸದಸ್ಯರೇ ಮುಂದೆ ನಿಂತು ಜಿಪಂ ಮಾಜಿ ಸದಸ್ಯ, ಗ್ರಾಮದ ಹಿರಿಯ ಮುಖಂಡ ತೇಜಸ್ವಿ ಪಿ.ಪಟೇಲ್ ನೇತೃತ್ವದಲ್ಲಿ ಹೊಸದಾಗಿ ಕಟ್ಟಿದ್ದ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಪಂಚಾಯತ್ಗೆ ಸ.ನಂ.45-7ರಲ್ಲಿ 33 ಗುಂಟೆ ಜಾಗದಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಳ್ಳಲು ಮನೆಗೆ ಖಾತೆ, ವಿದ್ಯುತ್ ಸಂಪರ್ಕ ಕಲ್ಪಿಸಲು ನಿರಾಕ್ಷೇಪಣಾ ಪತ್ರ ಕಡ್ಡಾಯವೆಂಬ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಗ್ರಾಮದ ಹಿರಿಯ ಮುಖಂಡ, ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್, ರೈತರ ತಮ್ಮದೇ ಜಮೀನಿನಲ್ಲಿ ವಸತಿ ಉದ್ದೇಶಕ್ಕೆ ಭೂ ಪರಿವರ್ತಿಸಿಕೊಂಡು ಮನೆ ಕಟ್ಟಿಕೊಳ್ಳುವವರಿಗೆ ಮಾತ್ರ ವಿದ್ಯುತ್ ಸಂಪರ್ಕ ಎಂಬ ಕಾನೂನು ಜಾರಿಗೊಳಿಸಿದ್ದನ್ನು ಖಂಡಿಸಿ ಕಾರಿಗನೂರು ಗ್ರಾಪಂ ಸದಸ್ಯರೇ ಮುಂದೆ ನಿಂತು, ಹಳ್ಳಿ ಶಾಂತಪ್ಪನವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.ಉದ್ದೇಶ ರಹಿತ ಕಾನೂನು ಯಾವುದೂ ಇರಲಿಕ್ಕೆ ಸಾಧ್ಯವಿಲ್ಲ. ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುವವರು ಭೂ ಪರಿವರ್ತನೆ ಮಾಡಿಕೊಳ್ಳಬೇಕೆನ್ನುವ ಕಡ್ಡಾಯದ ಹಿಂದೆ ಇರುವ ತರ್ಕ ಅರ್ಥವಾಗುತ್ತಿಲ್ಲ. ಮುಂಚಿನಂತೆ ವಿದ್ಯುತ್ ಸರಬರಾದು ನಿಗಮಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಿ, ವಿದ್ಯುತ್ ಸಂಪರ್ಕ ಹೊಂದುವ ಅವಕಾಶ ಪುನಾ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದಕಕಿಂತ ಹೆಚ್ಚು ಮನೆಗಳನ್ನು ಕಟ್ಟುವಂತಹ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕೆಂದರೆ ಒಪ್ಪಬಹುದು. ಆದರೆ, ಒಂದು ಮನೆ ಕಟ್ಟುವವರೂ ಸಹ ಭೂ ಪರಿವರ್ತಿಸಿಕೊಂಡು ನಗರ ಯೋಜನೆ ಪ್ರಾಧಿಕಾರದಿಂದ ನಕ್ಷೆಯನ್ನು ಅನುಮೋದನೆ ಪಡೆಯಬೇಕೆನ್ನುವ ನಿಯಮವು ಗ್ರಾಮೀಣ ಪ್ರದೇಶಗಳಿಗೆ ಈ ನಿಯಮದ ಅಗತ್ಯತೆಯನ್ನು ಪುನರ್ ಪರಿಶೀಲಿಸುವ ಕೆಲಸ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಳ್ಳಿ ಶಾಂತಪ್ಪನವರು ವಿದ್ಯುತ್ ಸರಬರಾಜು ನಿಗಮಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಲು 7 ಸಾವಿರ ರು.ಡಿಡಿಯನ್ನು ಬೆಸ್ಕಾಂ ಎಇಇ, ಸಂತೇಬೆನ್ನೂರು ಇವರ ಹೆಸರಿಗೆ ಡಿಡಿ ತೆಗೆಸಿದ್ದಾರೆ. ಸರ್ಕಾರವು ಗ್ರಾಮೀಣರಿಗೆ ಹೊಲದಲ್ಲಿ ಮನೆ ಕಟ್ಟಿಕೊಳ್ಳಲು ಹೀಗೆಲ್ಲಾ ಸಮಸ್ಯೆಯಾಗುವಂತಹ ನಿಯಮ, ಕಾನೂನು ಹೇರದೇ, ಕೈಬಿಡಬೇಕು. ಮುಂಚೆ ಇದ್ದಂತಹ ವ್ಯವಸ್ಥೆಯನ್ನೇ ಪುನಾ ಜಾರಿಗೊಳಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಪ್ರಿಯಾಂಕ ಮಂಜುನಾಥ, ಉಪಾಧ್ಯಕ್ಷ ನೂರ್ ಫಾತಿಮಾ ಅನ್ಸರ್ ಖಾನ್, ಸದಸ್ಯರಾದ ಬಸವೇಶ ಪಟೇಲ್, ಸಂದೀಪ್, ಕಿರಣ್, ಚೇತನಕುಮಾರ ಅರೇಹಳ್ಳಿ ಇತರರು ಇದ್ದರು.