ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ತಾಲ್ಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮ ನರೇಗಾ ಯೋಜನೆಯ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಯ ಕುರಿತು ಗುರುವಾರ ಗ್ರಾಮ ಸಭೆ ನಡೆಸಲಾಯಿತು.
ಗ್ರಾಮ ಪಂಚಾಯತಿ ವ್ಯಾಪ್ತಿಯ 6 ವಾರ್ಡ್ಗಳಲ್ಲಿ ನಿಯಮಾನುಸಾರ ವಾರ್ಡ್ ಸಭೆಗಳನ್ನು ನಡೆಸಿ ಯೋಜನೆಯ ಮಾಹಿತಿ ಮುಟ್ಟಿಸಿ 198 ಕಾಮಗಾರಿಗಳ ಬೇಡಿಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಸದರಿ ಕಾಮಗಾರಿಗಳ ಅನುಮೋದನೆ ಕುರಿತು ಗ್ರಾಮ ಸಭೆಯಲ್ಲಿ ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.ಗ್ರಾಪಂ ಕಾರ್ಯದರ್ಶಿ ಅಶೋಕ ಕೊರವೇರ ಅವರು, ಬೇಡಿಕೆ ಸಲ್ಲಿಕೆಯಾದ 198 ಕಾಮಗಾರಿಗಳ ಹೆಸರುಗಳನ್ನು ಓದಿ ಸಭೆಗೆ ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯ ಅಧಿಕಾರಿ ಅನಿಲ್ ಚವ್ಹಾಣ ಮಾತನಾಡಿ, ನರೇಗಾ ಯೋಜನೆಯಡಿ ರಸ್ತೆ ಬದಿ ನೆಡುತೋಪು ನಿರ್ಮಾಣ, ಗೋಮಾಳ, ಸರ್ಕಾರಿ ಜಾಗದಲ್ಲಿ ನೆಡುತೋಪು ನಿರ್ಮಾಣ ಹಾಗೂ ರೈತರ ಜಮೀನಿನಲ್ಲಿ ಶ್ರೀಗಂಧ, ಹೆಬ್ಬೆವು ಅರಣ್ಯ ಕೃಷಿ ಮಾಡಲು ಅವಕಾಶವಿದ್ದು, ರೈತರು ಬೇಡಿಕೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾ.ಪಂ.ಸದಸ್ಯ ಹನುಮಂತ ಹಂಡ್ರಗಲ್, ಕೇವಲ ರಸ್ತೆ ಬದಿಯಲ್ಲಿ ಕಾಮಗಾರಿ ಪ್ರಾರಂಭಿಸಿ 4 ವರ್ಷ ನಿರ್ವಹಣೆ ವೆಚ್ಚ ಭರಿಸುತ್ತೀರಿ ಇದರಿಂದ ಯಾರಿಗೂ ಪ್ರಯೋಜನವಾಗದೆ ಸರ್ಕಾರದ ದುಡ್ಡು ಪೋಲಾಗುತ್ತಿದೆ. ಕಾಮಗಾರಿ ಅನುಷ್ಠಾನಗೊಂಡ ಸ್ಥಳಗಳಲ್ಲೆ ಮತ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅಗತ್ಯ ಕಾಮಗಾರಿಗಳ ಮಾಹಿತಿ ನೀಡಿ ಫಲಾನುಭವಿಗಳಿಂದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಿದರು.ಮುದ್ದೇಬಿಹಾಳ ಬ್ಲಾಕ್ ಆರೋಗ್ಯ ಅಧಿಕಾರಿ ಅನಸೂಯ ತೇರದಾಳ ಮಾತನಾಡಿ, ಗ್ರಾಮೀಣ ಪ್ರದೇಶದ ಆರೋಗ್ಯ ಸುಧಾರಣೆಗೆ ಶೌಚಾಲಯಗಳ ನಿರ್ಮಾಣ ಅಗತ್ಯವಿದೆ. ಶೌಚಾಲಯ ಜಾಗೃತಿಗಾಗಿ ಡಿ.10ರವರೆಗೆ ಸಪ್ತಾಹ ಅಭಿಯಾನ ಹಮ್ಮಿಕೊಂಡಿದ್ದಾಗಿ ಹೇಳಿದರು.