ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿ ಅನುಷ್ಠಾನ ಮಾಡಲು ಅವಕಾಶ ಇದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು
ಕೊಪ್ಪಳ: ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗೂ ಗ್ರಾಮಸ್ಥರ ಮೂಲಕ ಬಂದ ಬೇಡಿಕೆಗಳನ್ನು ಈಡೇರಿಸಲು ಗ್ರಾಮಸಭೆಗಳು ಪೂರಕ ಎಂದು ಗ್ರಾಮಸಭೆ ನೋಡಲ್ ಅಧಿಕಾರಿ ಬಸವರಾಜ ಪಾಟೀಲ್ ಹೇಳಿದರು.
ತಾಲೂಕಿನ ಇರಕಲ್ಲಗಡ ಗ್ರಾಮದ ರುದ್ರಮುನೀಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ 2026-27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತು ಜರುಗಿದ ಗ್ರಾಮಸಭೆಯಲ್ಲಿ ಮಾತನಾಡಿದರು.ಈಗಾಗಲೇ ಮನೆ ಮನೆ ಭೇಟಿ ಮೂಲಕ ರೈತರಿಂದ ಗ್ರಾಮಸ್ಥರಿಂದ ಕಾಮಗಾರಿ ಬೇಡಿಕೆ ಪಡೆಯಲಾಗಿದೆ. ವಾರ್ಡ್ ಸಭೆಯಲ್ಲಿಯೂ ಬೇಡಿಕೆ ಪಡೆಯಲಾಗಿದ್ದು, ಅಂತಿಮವಾಗಿ ಪಟ್ಟಿ ತಯಾರಿಸಿ ಗ್ರಾಮಸಭೆ ಮೂಲಕ ಒಪ್ಪಿಗೆ ಪಡೆದು ಮಾನವ ದಿನಗಳ ಗುರಿಗೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಪಂ ವತಿಯಿಂದ ಅನುಮೋದನೆ ಪಡೆಯಲಾಗುತ್ತದೆ ಎಂದರು.
ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿ ಅನುಷ್ಠಾನ ಮಾಡಲು ಅವಕಾಶ ಇದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ ಮಾತನಾಡಿ, ವಾರ್ಡ್ ಸಭೆಗಳ ಮೂಲಕ ಗ್ರಾಪಂ ವತಿಯಿಂದ ಕಾಮಗಾರಿ ಬೇಡಿಕೆ ಪಡೆಯಲು ಸಭೆ ನಡೆಸಲಾಗಿದ್ದು, ಏಪ್ರಿಲ್ನಿಂದ ಕಾಮಗಾರಿ ಆರಂಭಿಸಲು ಕೂಲಿಕಾರರ, ರೈತರ ಬೇಡಿಕೆ ಸಲ್ಲಿಸಲು ಇದೊಂದು ಸದಾವಕಾಶ.. ವೈಯಕ್ತಿಕ ಕಾಮಗಾರಿ ಜಾನುವಾರು ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಇತ್ಯಾದಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವದನ್ನು ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.
ಕೃಷಿ ಅಧಿಕಾರಿ ಯೋಗೇಶ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ಶಿವಮ್ಮ ಶೇಖರಪ್ಪ ನಾಯಕ, ಸದಸ್ಯರಾದ ರಾಮಣ್ಣ ಗೋಸಲದೊಡ್ಡಿ, ವೀರಭದ್ರಯ್ಯ ಕಲ್ಮಠ, ರೇವಣಸಿದ್ದಯ್ಯ ಹಿರೇಮಠ, ದ್ಯಾಮಣ್ಣ ದೇಸಾಯಿ, ಪ್ರವೀಣ, ಕೊಟ್ರೇಶ್, ರವಿಶಂಕರ, ಮೌನೇಶ್, ಶ್ರೀದೇವಿ, ರೈತರು, ಸಂಜಿವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು, ಕಾಯಕ ಬಂಧುಗಳು, ಮಹಿಳೆಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.