ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಮಕರ ಸಂಕ್ರಾಂತಿಯ ಅಂಗವಾಗಿ ಗುರುವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣ ಮಠದ ರಥಬೀದಿಯಲ್ಲಿ ವೈಭವದ ಹಗಲು ರಥೋತ್ಸವ ನಡೆಯಿತು.
ಉಡುಪಿ: ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಮಕರ ಸಂಕ್ರಾಂತಿಯ ಅಂಗವಾಗಿ ಗುರುವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣ ಮಠದ ರಥಬೀದಿಯಲ್ಲಿ ವೈಭವದ ಹಗಲು ರಥೋತ್ಸವ ನಡೆಯಿತು.
ಬುಧವಾರ ರಾತ್ರಿ ರಥಬೀದಿಯಲ್ಲಿ ವಿಜೃಂಭಣೆಯ ಮೂರು ತೇರಿನ ಉತ್ಸವ ನಡೆದಿತ್ತು. ಸಂಪ್ರದಾಯದಂತೆ ಮರು ದಿನ ಬ್ರಹ್ಮರಥದಲ್ಲಿ ಹಗಲು ಉತ್ಸವ ಅಥವಾ ಚೂರ್ಣೋತ್ಸವ ನಡೆಯಿತು, ಇದರಲ್ಲಿ ಸಾವಿರಾರು ಭಕ್ತಾಧಿಗಳು ಸಂಭ್ರಮದಿಂದ ಭಾಗವಹಿಸಿದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು, ಪರ್ಯಾಯ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆರೋಹಣ ಮಾಡಿದರು. ರಥದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ದೇವರಿಗೆ ಪೂಜೆ ಸಲ್ಲಿಸಿದ ನಂತರ ಶ್ರೀಗಳು ರಥದಿಂದಲೇ ಭಕ್ತರಿಗೆ ಲಡ್ಡು, ಹಣ್ಣುಹಂಪಲು ಇತ್ಯಾದಿ ಪ್ರಸಾದ ವಿತರಣೆ ಮಾಡಿದರು, ಈ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಪೈಪೋಟಿ ನಡೆಸಿದರು.
ಮಂಗಳವಾದ್ಯ, ಬಿರುದಾವಳಿಗಳೊಂದಿಗೆ ನಡೆದ ಈ ರಥೋತ್ಸವದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಹರಕೆ ಹೊತ್ತ ಭಕ್ತರಿಂದ ಬ್ರಹ್ಮರಥದ ಮುಂಭಾಗದಲ್ಲಿ ಉರುಳು ಸೇವೆ ನಡೆಯಿತು. ರಥೋತ್ಸವದ ನಂತರ ಉತ್ಸವ ಮೂರ್ತಿಗಳಿಗೆ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನಡೆಯಿತು. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪರ್ಯಾಯ ಸಮಾಪನ ವೇಳೆ ನಡೆದ ಈ ಬ್ರಹ್ಮರಥೋತ್ಸವದ ನಂತರ ನಡೆದ ಮಹಾ ಸಂತರ್ಪಣೆಯಲ್ಲಿ ಹತ್ತಾರು ಸಾವಿರ ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.