ಕನ್ನಡಪ್ರಭ ವಾರ್ತೆ ಕಲಬುರಗಿ
ಬೆಂಗಳೂರಿನಿಂದ ಕಲಬುರಗಿಗೆ ಬೆಳಗಿನ ವಿಮಾನದಿಂದ ಬಂದಿಳಿದಿದ್ದ ಜಗದೇವ ಅವರಿಗೆ ಕಾರ್ಯಕರ್ತರೆಲ್ಲರು ಸೇರಿಕೊಂಡು ಏರ್ಪೋರ್ಟ್ನಿಂದಲೇ ಬಹಿರಂಗ ಮೆರವಣಿಗೆಯಲ್ಲಿ ಸ್ವಾಗತ ಕೋರಿದರು. ಅಲ್ಲಿಂದ ನಡೆದ 3 ಗಂಟೆಗಳ ಮೆರವಣಿಗೆ ಕಾಂಗ್ರೆಸ್ ಕಚೇರಿಗೆ ಬಂದು ತಲುಪಿದಾಗ ಮ.1ಗಂಟೆಯಾಗಿತ್ತು.
ಅಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶುರುವಾದ ಸಮಾರಂಭದಲ್ಲಿ ಭಸವಣ್ಣನವರ ಪುತ್ಥಳಿ ನೀಡಿ ಜಗದೇವ ಗುತ್ತೇದಾರ್ ಅವರಿಗೆ ಸಚಿವರಾದ ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಎಂವೈ ಪಾಟೀಲ್, ಖನೀಜ್ ಫಾತೀಮಾ, ತಿಪ್ಪಣ್ಣ ಕಮಕನೂರ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಸ ರಾಠೋಡ, ಪ್ರ. ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ್, ಭಾಗಣಗೌಡ ಪಾಟೀಲ್ ಸಂಕನೂರ್, ಭೀಮರಾವ ಟಿಟಿ, ನಾರಾಯಣರಾವ ಕಾಳೆ, ಬಾಬೂರಾವ ಜಾಗಿರ್ದಾರ್ ಸೇರಿದಂತೆ ಅನೇಕರು ಶುಭ ಕೋರಿದರು.ಜಗದೇವ ಗುತ್ತೇದಾರ್ ಅವರ ಪಕ್ಷ ನಿಷ್ಠೆ ಕೊಂಡಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್ ಪಕ್ಷ ಸಂಘಟನೆಗೆ ದುಡಿದವರಿಗೆ ಎಂತಹ ಕೊಡುಗೆ ವರಿಷ್ಠರು ಕೊಡುತ್ತಾರೆ ಎನ್ನಲು ಜಗದೇವ ಗುತ್ತೇದಾರ್ ಅವರೇ ಸಾಕ್ಷಿ ಎಂದರಲ್ಲದೆ ತಾವು, ಗುತ್ತೇದಾರ್, ಶರಣ ಪಾಟೀಲ್ ಸರಿದಂತೆ ಎಲ್ಲರು ವಿದ್ಯಾರ್ಥಿ ಸಂಘಟನೆಯಿಂದಲೇ ಒಂದಾಗಿ ರಾಜಕೀಯದಲ್ಲಿ ಬಂದ ಬಗೆ ವಿವರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾವು ಸ್ಥಾನಮಾನಗಳಿಗಾಗಿ ಕಾಯಲೇಬೇಕು. ಎಐಸಿಸಿ ಅಧ್ಯಕ್ಷರಾಗಿರುವ ಡಾ. ಖರ್ಗೆಯವರು ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಪರಿಪಾಠ ಹಾಕಿಕೊಂಡವರು. ಅವರ ನೇತೃತ್ವದಲ್ಲಿ ಎಲ್ಲರಿಗೂ ಉತ್ತಮ ಸ್ಥಾನಮಾನ ದೊರಕಲಿ, ಕಾಂಗ್ರೆಸ್ ಬಲಗೊಳ್ಳುತ್ತ ಸಾಗಲಿ ಎಂದು ಹಾರೈಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಾಶ ಪಾಟೀಲ್ ಮಾತನಾಡಿ ಡಾ. ಮಲ್ಲಿಕಾರ್ಜುನ ಖರ್ಗೆಯವರು ಅವಕಾಶ ಸಿಗದವರಿಗೆ, ಪಕ್ಷ ನಿಷ್ಠರಿಗೆ ಗುರುತಿಸುತ್ ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ದಗದೇವ ಸೇರಿದ್ದಾರೆಂದು ಅಭಿನಂದಿಸಿದರು. ತಾವು ಹಾಗೂ ಜಗದೇವ ಇಬ್ಬರೂ ಜಿಪಂ ಸದಸ್ಯರಾಗಿದ್ದಾಗಿ ಹಳೆಯದನ್ನು ಮೆಲಕು ಹಾಕಿದ ಡಾ. ಪಾಟೀಲ್ ಬರುವ ದಿನಗಳಲ್ಲಿ ಜಗದೇವ ಮೇಲ್ಮನೆಯಲ್ಲಿ ಹೆಚ್ಚಿನ ಕೆಲಸ ಮಾಡಲಿ ಎಂದರು.ಸಣ್ಣ ಕೈಗಾರಿಕೆ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಮಾತನಾಡುತ್ತ ಜಗದೇವ ಗುತ್ತೇದಾರರ ತಾಳ್ಮೆ, ಪಕ್ಷ ನಿಷ್ಠೆ ಹೈಕಮಾಂಡ್ ಗುರುತಿಸಿದೆ, ಪಕ್ಷದಲ್ಲಿ ಕೆಳಹಂತದಲ್ಲಿ ಯಾರೂ ದುಡಿಯವರೋ ಅವರಿಗೆ ಹೈಕಮಾಂಡ್ ಗೌರವಿಸುತ್ತದೆ ಎಂದರು.
ಶಾಸಕ ತಿಪ್ಪಣ್ಣ ಕಮಕನೂರ್ ಮಾತನಾಡುತ್ತ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಿಗೆ ಅವಕಾಶ ಹೇಗೆ ಬರುತ್ತದೆ ಎನ್ನಲು ಜಗದೇವ ಗುತ್ತೇದಾರ್ ಕನ್ನಡಿ ಎಂದರು. 7 ವರ್ಷ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿರುವ ಗುತ್ತೇದಾರ್ ಎಲ್ಲರ ಮನಸ್ಸು ಗೆದ್ದವರು. ಯಾವುದೇ ವಿವಾದಗಲಿಲ್ಲದೆ ಪಕ್ಷ ಕಟ್ಟಿ ಬೆಳೆಸುವಲ್ಲಿ ಕೊಡುಗೆ ಕೊಟ್ಟವರು. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಗೌರವಿಸಿದೆ. ತಾವು ಹಾಗೂ ಜಗದೇವ ಗುತ್ತೇದಾರ್ ಸೇರಿಕೊಂಡು ಮೇಲ್ಮನೆಯಲ್ಲಿ ಜನರ ಧ್ವನಿಯಾಗೋದಾಗಿ ಕಮಕನೂರ್ ಹೇಳಿದರು.ಕೆಪಿಸಿಸಿ ಉಪಾಧ್ಯಕ್ಷ ಸುಭಾಸ ರಾಠೋಡ, ಪ್ರ. ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಬಾಬೂರಾವ ಜಾಗಿರ್ದಾರ್ ಸೇರಿದಂತೆ ಅನೇಕರ ಸಾಮೂಹಿಕ ನೇತೃತ್ವದಲ್ಲಿ ನಡೆದ ಸನ್ಮಾನ ಸಮಾರಂಭ 2 ಗಂಟೆಗೂ ಹೆಚ್ಚುಕಾಲ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದು ಜಗದೇವ ಗುತ್ತೇದಾರ್ ಅವರಿಗೆ ಅಭಿನಂದಿಸಿದರು.