ಹುಬ್ಬಳ್ಳಿ:

ಕೌಟುಂಬಿಕ ಕಲಹದ ಹಿನ್ನೆಲೆ ಅಟೋ ಚಾಲಕನೋರ್ವ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗೇರಿಯ ಕೆಂಚಪ್ಪನ ತೋಟದ ಬಳಿಯ ಹರಿಜನ ಕಾಲನಿಯಲ್ಲಿ ನಡೆದಿದೆ.

ಸಂತೋಷ ಹಳ್ಳೂರ(39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈ ಆತ್ಮಹತ್ಯೆಗೆ ಆತನ ಪತ್ನಿ ಹಾಗೂ ಮಹಿಳಾ ಠಾಣೆಯ ಪೊಲೀಸರ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತ ಸಂತೋಷ ಹಾಗೂ ಲಲಿತಾ 18 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾಳೆ. ಪತ್ನಿಗೆ ಅಂಗನವಾಡಿಯಲ್ಲಿ ನೌಕರಿ ಕೊಡಿಸಿದ ನಂತರ ನೆಮ್ಮದಿಯಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಆರೋಪ ಕೇಳಿಬಂದಿದೆ.

ಪತಿಗೆ ತಿಳಿಸದೇ ಪತ್ನಿ ಊರೂರು ಸುತ್ತಾಡುತ್ತಿದ್ದುದನ್ನು ಪ್ರಶ್ನಿಸಿದ್ದರಿಂದ ಈ ವಿಚಾರದಲ್ಲಿ ಹಲವು ಸಲ ಜಗಳವಾಗುತ್ತಿತ್ತು. ಪತ್ನಿ ಲಲಿತಾ ಅವರು ಹುಬ್ಬಳ್ಳಿಯ ಮಹಿಳಾ ಪೊಲೀಸ್‌ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಳಲ್ಲದೇ ತಾನು ಪತಿಯ ಜತೆ ಸಂಸಾರ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿ ಲಲಿತಾ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯ ಪೊಲೀಸರು ಸಂತೋಷನಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಸಂತೋಷ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.