ಕನ್ನಡಪ್ರಭ ವಾರ್ತೆ ಬೆಂಗಳೂರುಜಿಬಿಎದಿಂದ ಆರ್ಥಿಕವಾಗಿ ಅನುದಾನ ಕೊಡಿಸುವುದಾಗಿ ಅಮಾಯಕರಿಗೆ ನಕಲಿ ಬ್ಯಾಂಕ್ ಡಿಡಿ ಕೊಟ್ಟು ವಂಚನೆ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ಅಮಾಯಕರು ನಕಲಿ ಡಿಡಿ ಇಡಿದುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯಿಂದ ನಗರ ಪಾಲಿಕೆಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
ಹೇಗೆ ವಂಚನೆ? ಜಿಬಿಎದಿಂದ ಬರೋಬ್ಬರಿ 3 ಲಕ್ಷ ರು. ವಿವಿಧ ಯೋಜನೆಯಡಿ ಆರ್ಥಿಕ ಅನುದಾನ ಕೊಡಿಸಲಾಗುವುದು. ಪಡೆದುಕೊಂಡ ಹಣವನ್ನು ವಾಪಸ್ ಪಾಲಿಕೆಗೆ ಪಾವತಿ ಮಾಡುತ್ತಿಲ್ಲ. ಅನುದಾನ ಬಿಡುಗಡೆ ಮಾಡಿದವರು ಸೇರಿದಂತೆ ಮತ್ತಿತರರಿಗೆ ಒಂದಿಷ್ಟು ಹಣ ಕೊಡಬೇಕು. 50 ಸಾವಿರ ರು. ಕೊಟ್ಟರೆ ಅನುದಾನ ಕೊಡಿಸಲಾಗುವುದು ಎಂದು ಆಸೆ ತೋರಿಸಿ 50 ಸಾವಿರ ರು. ಹಣವನ್ನು ಪಡೆದು ನಕಲಿ ಡಿಡಿ ವಿತರಣೆ ಮಾಡಿ ಪರಾರಿ ಆಗಿದ್ದಾರೆ. ಈ ನಕಲಿ ಡಿಡಿ ಇಡುಕೊಂಡ ಅಮಾಯಕರು ಅಲೆದಾಡುತ್ತಿದ್ದಾರೆ.
ಅಧಿಕಾರಿಗಳ ಸಹಿ ನಕಲಿ!ಖಾಸಗಿ ಬ್ಯಾಂಕ್ನ ಡಿಡಿ ಬಳಕೆ ಮಾಡಿಕೊಂಡು ಅದರಲ್ಲಿ ಜಿಬಿಎ ಆಯುಕ್ತರು ಹಾಗೂ ಆರೋಗ್ಯಾಧಿಕಾರಿ ಸೀಲ್ ಮತ್ತು ಸಹಿ ನಕಲಿ ಮಾಡಲಾಗಿದೆ. ಜಿಬಿಎದಲ್ಲಿ ವಿಶೇಷ ಆಯುಕ್ತರು ಮತ್ತು ಮುಖ್ಯ ಆಯುಕ್ತರು ಇದ್ದಾರೆ. ಆದರೆ, ಆಯುಕ್ತರು ಎಂದು ಸೀಲ್ ಮತ್ತು ಸಹಿ ನಕಲಿ ಮಾಡಿರುವುದು ಕಂಡು ಬಂದಿದೆ. ಈ ಹಿಂದೆಯೇ ಹಲವು ಬಾರಿ ಈ ರೀತಿ ನಕಲಿ ಡಿಡಿ ಹಾವಳಿ ಪತ್ತೆ ಆಗಿದ್ದವು. ಈ ಬಗ್ಗೆ ಗಂಭೀರವಾಗಿ ಪರಿಗಣಿಸದಿರುವುದು ನಕಲಿ ಡಿಡಿ ವಂಚನೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ.