ನಾಗಮಂಗಲದಲ್ಲಿ ನಾಳೆ ವೈಭವದ ಸಾಮೂಹಿಕ ಗಣೇಶ ವಿಸರ್ಜನೆ

KannadaprabhaNewsNetwork |  
Published : Sep 20, 2026, 02:30 AM IST
19ಕೆಎಂಎನ್‌ಡಿ-3 ನಾಗಮಂಗಲ ಪಟ್ಟಣದಲ್ಲಿ ಸೋಮವಾರ ಜರುಗುವ ಸಾಮೂಹಿಕ ಗಣೇಶೋತ್ಸವದ ಹಿನ್ನಲೆಯಲ್ಲಿ ಇಡೀ ನಾಗಮಂಗಲ ಪಟ್ಟಣ ಕೇಸರಿಮಯದಿಂದ ಕಂಗೊಳಿಸುತ್ತಿರುವುದು. | Kannada Prabha

ಸಾರಾಂಶ

ಸಾಮೂಹಿಕ ಗಣೇಶೋತ್ಸವದಲ್ಲಿ 50ಮಂದಿ ಪುರೋಹಿತರ ತಂಡದಿಂದ ವೇದಘೋಷ, ಭಜನೆ, ಕೀರ್ತನೆ ಹಾಗೂ ಯುವಕರ ತಂಡದಿಂದ ಅತ್ಯಾಕರ್ಷಕ ಸಾಹಸ ಕ್ರೀಡೆ (ಜಿಮ್ನಾಸ್ಟಿಕ್) ನಡೆಯಲಿದೆ. ಇಷ್ಟುಮಾತ್ರವಲ್ಲದೆ ಡಿ.ಜೆ, ಮಂಗಳವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ, ಚಂಡೆವಾದ್ಯ, ಕಂಸಾಳೆ, ತಮಟೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

120ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಕಣ್ಗಾವಲು, ಪೊಲೀಸರ ಬಿಗಿ ಸರ್ಪಗಾವಲಿನಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದೊಗೆ ಪಟ್ಟಣದಲ್ಲಿ ಸೋಮವಾರ (ಸೆ.21) ವೈಭವದ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮ ಜರುಗಲಿದೆ.

ಪಟ್ಟಣದಲ್ಲಿ ಎರಡನೇ ವರ್ಷದ ಸಾಮೂಹಿಕ ಗಣೇಶೋತ್ಸವದ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಮುಂದಾಗಿರುವ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿಯ ಹಿಂದೂ ಕಾರ್ಯಕರ್ತರು ಸಕಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ. ಸೋಮವಾರ ಜರುಗುವ 13 ಸಾಮೂಹಿಕ ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ನಾಗಮಂಗಲ ಪಟ್ಟಣ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿಮಯದಿಂದ ಕಂಗೊಳಿಸುತ್ತಿದೆ. ಚಾಮರಾಜನಗರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಗೇಟ್‌ನಿಂದ ಮಂಡ್ಯ ವೃತ್ತದ ವರೆಗೆ ಹೆದ್ದಾರಿಯ ವಿಭಜಕದಲ್ಲಿರುವ ಬೀದಿದೀಪದ ಕಂಬಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ.

ಡಿಜೆ ಸೇರಿ ಜಾನಪದ ಕಲಾತಂಡಗಳ ಮೆರಗು:

ಸಾಮೂಹಿಕ ಗಣೇಶೋತ್ಸವದಲ್ಲಿ 50ಮಂದಿ ಪುರೋಹಿತರ ತಂಡದಿಂದ ವೇದಘೋಷ, ಭಜನೆ, ಕೀರ್ತನೆ ಹಾಗೂ ಯುವಕರ ತಂಡದಿಂದ ಅತ್ಯಾಕರ್ಷಕ ಸಾಹಸ ಕ್ರೀಡೆ (ಜಿಮ್ನಾಸ್ಟಿಕ್) ನಡೆಯಲಿದೆ. ಇಷ್ಟುಮಾತ್ರವಲ್ಲದೆ ಡಿ.ಜೆ, ಮಂಗಳವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ, ಚಂಡೆವಾದ್ಯ, ಕಂಸಾಳೆ, ತಮಟೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಹಂಪೆ ಅರಸನ ಕೊಳದಲ್ಲಿ ಅಂತಿಮವಾಗಿ ಕ್ರೇನ್‌ ಯಂತ್ರದ ಮೂಲಕ ವಿಸರ್ಜನೆ ಮಾಡಲಾಗುವುದು.

120ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಕಣ್ಗಾವಲು:

ಸಾಮೂಹಿಕ ಗಣೇಶ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳ 40 ಸ್ಥಳಗಳಲ್ಲಿ ತಲಾ 3ರಂತೆ ಒಟ್ಟು 120 ಸಿಸಿ ಕ್ಯಾಮೆರಾಗಳ ಜೊತೆಗೆ ಪ್ರಮುಖ ಸ್ಥಳಗಳಲ್ಲಿ 360ಡಿಗ್ರಿಯ 18 ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಇದಲ್ಲದೆ 2 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

500ಕ್ಕೂ ಹೆಚ್ಚು ಪೊಲೀಸ್ ಸರ್ಪಗಾವಲು:

ಸಾಮೂಹಿಕ ಗಣೇಶೋತ್ಸವದ ಬಂದೋಬಸ್ತ್‌ಗಾಗಿ ಒಬ್ಬರು ಎಸ್ಪಿ, ಇಬ್ಬರು ಎಎಸ್‌ಪಿ, 4ಮಂದಿ ಡಿವೈಎಸ್‌ಪಿ, 15ಮಂದಿ ಸಿಪಿಐ, 25ಮಂದಿ ಪಿಎಸ್‌ಐ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳ ಜೊತೆಗೆ 2ಕೆಎಸ್‌ಆರ್‌ಪಿ ತುಕಡಿ ಮತ್ತು 5 ಡಿಎಆರ್ ವಾಹನಗಳನ್ನು ನಿಯೋಜಿಸಲಾಗಿದೆ.

ಇಂದು ಹೊಳಲಿನಲ್ಲಿ ಗಣೇಶಮೂರ್ತಿಗಳ ವಿಸರ್ಜನೆ

ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕು ಹೊಳಲು ಗ್ರಾಮದಲ್ಲಿ ವಿನೂತನವಾಗಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಪ್ರತಿದಿನ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ನಡೆಯುತ್ತಿದೆ. ಭಾನುವಾರ (ಸೆ.20)ದಂದು ಎಲ್ಲ ಗಣೇಶಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.

ಚಿಕ್ಕತಮ್ಮನಹಳ್ಳಿಯಲ್ಲಿ ಶ್ರೀವಕ್ರತುಂಡ ಗೆಳೆಯರ ಬಳಗದಿಂದ ಕೂರಿಸಿರುವ ವಿಘ್ನೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿ ಅನ್ನಸಂತರ್ಪಣೆ ಕಾರ್ಯಕ್ರಮದೊಂದಿಗೆ ವಿಸರ್ಜಿಸಲಾಗುವುದು ಎಂದು ಸಂಘದ ಸದಸ್ಯರಾದ ದೀಪಕ್ ತಿಳಿಸಿದ್ದಾರೆ. ಚಿಕ್ಕಬೀದಿಯ ಸರ್.ಎಂ. ವಿಶ್ವೇಶ್ವರಯ್ಯ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಸ್ಟಾರ್ ಬಾಯ್ಸ್ ಗೆಳೆಯರ ಬಳಗದಿಂದ ವಿನಾಯಕ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ವಿಸರ್ಜಿಸಲಾಗುವುದು.ಶ್ರೀಬಸವೇಶ್ವರ ಬೀದಿಯಲ್ಲಿ (ವಾಟರ್ ಟ್ಯಾಂಕ್) ಪ್ರತಿಷ್ಠಾಪಿಸಿರುವ ಶ್ರೀವಿದ್ಯಾ ವಿನಾಯಕ, ಎಚ್ .ಡಿ.ಚೌಡಯ್ಯ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಗಿಲ್ಲಿ ಬಾಯ್ಸ್ ಶ್ರೀ ವಿನಾಯಕ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಶ್ರೀ ವಿನಾಯಕ ಮೂರ್ತಿಯನ್ನೂ ಭಾನುವಾರದಂದೇ ವಿಸರ್ಜನೆ ಮಾಡಲಾಗುವುದು.

ಆದರೆ, ಶ್ರೀಎಚ್ಚಮ್ಮ ನಾಯಕ ಸರ್ಕಲ್ ನಲ್ಲಿ ದಿಢೀರ್ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ವಿನಾಯಕ ಮೂರ್ತಿಯನ್ನು (ಪಿತೃಪಕ್ಷ) ಮಹಾನವಮಿ ದಿನ ವಿಸರ್ಜಿಸಲಾಗುವುದು. ವಿಶೇಷವಾಗಿ ವಿನಾಯಕ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಮಟೆ, ನಗಾರಿ ಹಾಗೂ ಜಾನಪದ ಕಲಾಮೇಳದೊಂದಿಗೆ ವಿಸರ್ಜಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ದಶಕಗಳ ನಂತರ ಸಕಲೇಶಪುರಕ್ಕಿಂದು ಮುಖ್ಯಮಂತ್ರಿ ಆಗಮನ
ಬಿಜೆಪಿ ರೈತ ಮೋರ್ಚಾ ವತಿಯಿಂದ ಸ್ವಚ್ಚತಾ ಅಭಿಯಾನ