ಶಿವಮೊಗ್ಗ: ಅ.7ರಂದು ನಗರದಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಈ ವರ್ಷ ಕಲಾ ತಂಡದ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಜಯಂತಿ ಎಲ್ಲಿ ಆಚರಣೆ ಮಾಡಬೇಕೆಂಬ ಗೊಂದಲ ಬೇಡ, ಸಮಾಜದ ಮುಖಂಡರೆಲ್ಲಾ ಸೇರಿ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ ನಿರ್ಧಾರ ಮಾಡಿ, ಅದರಂತೆ ಜಿಲ್ಲಾಡಳಿತ ಜಯಂತಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಿದ್ದು, ಸಂಚಾರಕ್ಕೆ ಮತ್ತು ಮೆರವಣಿಗೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಹೊರಡುವ ಭಾವಚಿತ್ರಕ್ಕೆ ಹೂವಿನ ಹಾಗೂ ತೋರಣದ ಅಲಂಕಾರ ಮಹಾನಗರ ಪಾಲಿಕೆ ಮಾಡಲಿದ್ದು, ಜಯಂತಿ ಮುಗಿದ ಬಳಿಕ ಊಟ ಹಾಗೂ ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.ಜಯಂತಿ ದಿನದಂದು ವಿದ್ಯಾನಗರದ ಬಳಿ ಇರುವ ವಾಲ್ಮೀಕಿ ವೃತ್ತಕ್ಕೆ ಹೊಸ ನಾಮಫಲಕ ಅಳವಡಿಸಲಿದ್ದು, ಸಮಾಜದ ಮುಖಂಡರಿಂದ ಪುಷ್ಪಾರ್ಚನೆ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೆರವಣಿಗೆಗೆ ಕಲಾ ತಂಡಗಳನ್ನು ನಿಯೋಜನೆ ಮಾಡಲು ತಿಳಿಸಲಾಗಿದ್ದು, ವಾಲ್ಮೀಕಿ ಸಮಾಜದಲ್ಲಿ ಕಲಾ ತಂಡಗಳಿದ್ದರೆ ಅದಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರಮುಖ ಅಧಿಕೃತ ಜಾಗದಲ್ಲಿ ೧೦ ಫ್ಲೆಕ್ಸ್, ಬ್ಯಾನರ್ ಅವಳಡಿಸಲಾಗುತ್ತದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ೧ ಲಕ್ಷ ರು. ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ದಿನದಂದು ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿಯಲ್ಲಿ ಜಯಂತಿಯನ್ನು ಆಚರಣೆ ಮಾಡಲು ಸೂಚನೆ ನೀಡಲಾಗುತ್ತದೆ ಎಂದರು.ಸಮಾಜದ ಮುಖಂಡರು ಮಾತನಾಡಿ, ಈ ಬಾರಿ ಜಯಂತಿಗೆ ಗ್ರಾಮಾಂತರ ಭಾಗದಿಂದ ಹೆಚ್ಚಿನ ಜನರು ಬರಲಿದ್ದು, ಎಲ್ಲಾ ಸಂಘಟನೆಗಳು ಸಹ ಭಾಗಿತ್ವದಲ್ಲಿ ವಹಿಸಲಿದ್ದಾರೆ. ಹಾಗಾಗಿ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಮೇಶ್ ಕುಮಾರ್, ಜಿಲ್ಲಾ ಪರಿಶಿಷ್ಟ ಪಂಗಡ ಇಲಾಖೆಯ ಕಲ್ಯಾಣಾಧಿಕಾರಿ ಶ್ರೀನಿವಾಸ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು.