ಕನ್ನಡಪ್ರಭ ವಾರ್ತೆ ಸಿರುಗುಪ್ಪ
ಧರ್ಮಸ್ಥಳ ಸಂಘದಿಂದ ಮಂಜೂರಾತಿಗೊಂಡ ₹ಒಂದು ಲಕ್ಷ ಮೊತ್ತದ ಡಿಡಿಯನ್ನು ಅಭಿವೃದ್ಧಿ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ವಿತರಿಸಿದರು.
ನಂತರ ಮಾತನಾಡಿದ ಅವರು, ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯವಾಗಿದೆ.ಈವರೆಗೆ ಸಿರಗುಪ್ಪ ತಾಲ್ಲೂಕಿನ 85 ದೇವಸ್ಥಾನಗಳಿಗೆ 1 ಕೋಟಿ 96 ಲಕ್ಷ ಮೊತ್ತದ ಅನುದಾನ ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಛ ಪರಿಸರ ಕಾಪಾಡಿದ ಹೆಗ್ಗಳಿಕೆ ಹೊಂದಿದ್ದು, ಅದರಂತೆ ನಮ್ಮ ಕರ್ನಾಟಕದ ಉಳಿದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನವಾಗುವ ಯೋಜನೆ ರೂಪಗೊಳಿಸಲಾಯಿತು. ತಾಲೂಕಿನಲ್ಲಿ 305 ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಕಸ ವಿಲೇವಾರಿಗೆ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ತಾಲೂಕಿನಲ್ಲಿ 04 ಮದ್ಯವರ್ಜನ ಶಿಬಿರ ಹಮ್ಮಿಕೊಂಡಿದ್ದು, ಇದರಿಂದ 250 ಜನರನ್ನು ಪಾನಮುಕ್ತರನ್ನಾಗಿ ಮಾಡಿ ಸುಂದರ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ದೇವಸ್ಥಾನದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಕಾಳಿಂಗಪ್ಪ, ನಾಗರಾಜ, ಎಸ್. ಗಾದಿಲಿಂಗಪ್ಪ, ಕರೂರು ವಲಯದ ಮೇಲ್ವಿಚಾರಕರಾದ ಹನುಮಂತಪ್ಪ, ಸ್ಥಳೀಯ ಸೇವಾಪ್ರತಿನಿಧಿಗಳು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.