ವೀರಶೈವ ಮಠಗಳಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ : ಉಜ್ಜಯನಿ ಜಗದ್ಗುರು

KannadaprabhaNewsNetwork |  
Published : May 09, 2025, 12:56 AM ISTUpdated : May 09, 2025, 09:28 AM IST
ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದ ಮಹಾತಪಸ್ವಿ ಸಂಗನಬಸವ ಶಿವಾಚಾರ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ, ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ನೂತನ ದಾಂಪತ್ಯಕ್ಕೆ ಅಡಿ ಇಟ್ಟ ೮ ಜೋಡಿಗಳಿಗೆ ಪೂಜ್ಯರು, ಗಣ್ಯರು ಅಕ್ಷತೆ ಹಾಕಿ ಆಶೀರ್ವದಿಸಿದರು. | Kannada Prabha

ಸಾರಾಂಶ

ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮ ಕೊಡುವ ಶಾಂತಿಯ ತೋಟವಾಗಿರುವ ವೀರಶೈವ ಮಠಗಳು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿವೆ ಎಂದು ಉಜ್ಜಯನಿ ಮಹಾಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

 ಬೀಳಗಿ : ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮ ಕೊಡುವ ಶಾಂತಿಯ ತೋಟವಾಗಿರುವ ವೀರಶೈವ ಮಠಗಳು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿವೆ ಎಂದು ಉಜ್ಜಯನಿ ಮಹಾಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಲ್ಯಾಣ ಹಿರೇಮಠದ ಮಹಾತಪಸ್ವಿ ಸಂಗನಬಸವ ಶಿವಾಚಾರ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ, ಲಿಂ. ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ನೂತನ ಶಿಲಾಮಂದಿರ ಲೋಕಾರ್ಪಣೆ, ಸರ್ವಧರ್ಮ ಸಾಮೂಹಿಕ ವಿವಾಹ, ಭಾವೈಕ್ಯ ಧರ್ಮ ಸಮ್ಮೇಳನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗಿರಿಸಾಗರ ಕಲ್ಯಾಣ ಮಠದಲ್ಲಿ ಇಲ್ಲಿಯವರೆಗೆ ೮೬೬ ಜೋಡಿಗಳ ಸಾಮೂಹಿಕ ಮದುವೆ ಮಾಡುವ ಮೂಲಕ ಕೋಟ್ಯಾತರ ರೂ. ಉಳಿತಾಯ ಮಾಡಿ ಕುಟುಂಬಗಳಿಗೆ ಅನುಕೂಲ ಮಾಡಿ ಕೊಟ್ಟ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ. ಇನ್ನಷ್ಟು ಧಾರ್ಮಿಕ ಕ್ರಾಂತಿ ಮಾಡಲಿ ಎಂದು ಆಶಿಸಿದರು.

ಮಠವೆಂದರೆ ಸ್ವಾಮಿಗಳ ವಾಸಸ್ಥಾನವಲ್ಲ. ಜನರ ಜೀವನ ಮಟ್ಟವನ್ನು ಹೆಚ್ಚಿಸುವ ತಾಣ.

೮ ಜೋಡಿಗಳು ಗೃಹಸ್ಥಾಶ್ರಮ ಪ್ರವೇಶ ಮಾಡಿದ್ದು, ಮನೆತನವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು. ಮನೆತನ ಒಡೆಯುವ ಕೆಲಸ ಮಾಡಬಾರದು. ಮನೆತನವನ್ನು ಬಾಳಿ ಬೆಳಗಿಸಬೇಕು. ಅತ್ತೆಯನ್ನು ಹೆತ್ತ ತಾಯಿಯಂತೆ ಕಾಣಬೇಕು. ಅತ್ತೆ ಸೊಸೆಯನ್ನು ಸ್ವಂತ ಮಗಳಂತೆ ಕಾಣಬೇಕು. ಆದರ್ಶ ದಂಪತಿಗಳಾಗಿ ದೇಶ ಹೆಮ್ಮೆ ಪಡುವಂಥ ಸಂತಾನ ತಮಗೆ ಪ್ರಾಪ್ತವಾಗಲೆಂದು ಶುಭ ಹಾರೈಸಿದರು.

ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿ, ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಡವ, ಬಲ್ಲಿದ, ಮೇಲು, ಕೀಳು, ಜಾತಿ, ಮತ, ಪಂಥ ಎನಿಸದೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ಮದುವೆಯಲ್ಲಿ ಪಾಲ್ಗೊಂಡ ನೀವೇ ಪುಣ್ಯವಂತರು. ಪಂಚಪೀಠಗಳಲ್ಲಿ ಉಜ್ಜಯನಿ ಪೀಠ ಪ್ರಭಾವಿ ಪೀಠವಾಗಿದ್ದು, ಕಲ್ಯಾಣ ಹಿರೇಮಠ ಪ್ರಭಾವಿ ಪೀಠವಾಗಿದೆ, ತಾಲೂಕಿನ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮ ನಡೆದರೂ ಶ್ರೀಮಠದ ಪೂಜ್ಯರ ಉಪಸ್ಥಿತಿ ಅವಶ್ಯಕ ಎನ್ನುವ ರೀತಿಯಲ್ಲಿ ಶ್ರೀಗಳು ಪ್ರಭಾವಿಗಳಾಗಿದ್ದಾರೆ ಎಂದು ಹೇಳಿದರು.

ಶ್ರೀಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನೂತನ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ೮ ಜೋಡಿಗಳು ಯಾವುದೇ ದುಶ್ಚಟಗಳನ್ನು ಮಾಡಬಾರದು. ಸತಿಪತಿ ಅನೋನ್ಯವಾಗಿರಬೇಕು. ಸಮಾಜದವರು ಮಾಡಿದ ಸಾಮೂಹಿಕ ಮದುವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ವಿಪ ಸದಸ್ಯ ಎಚ್‌ ಆರ್. ನಿರಾಣಿ ಮಾತನಾಡಿ, ದುಂದುವೆಚ್ಚ ಮಾಡಿ ಮದುವೆ ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಸಾಮೂಹಿಕ ಮದುವೆಯನ್ನು ಪ್ರತಿವರ್ಷವೂ ಶ್ರೀಮಠ ನಡೆಸಿಕೊಂಡು ಬರುತ್ತಿದೆ ಎಂದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಸಾಮಾಜಿಕವಾಗಿ ಸ್ವಾಸ್ಥ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಧಾರ್ಮಿಕ ಕಾರ್ಯಗಳಿಂದ ಒಗ್ಗಟ್ಟು ಸಾಧ್ಯ. ಧಾರ್ಮಿಕ ಚೌಕಟ್ಟನ್ನು ವಿಭಜಿಸುವ ಶಕ್ತಿಗಳು ಸಮಾಜದಲ್ಲಿದ್ದು. ಅವರಾರಿಗೂ ಧರ್ಮ ಒಡೆಯಲು ಸಾಧ್ಯವಾಗಿಲ್ಲ, ಇನ್ನು ಮುಂದೆಯು ಆಗುವದಿಲ್ಲವೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ಎನ್. ಪಾಟೀಲ, ಭಾಗ್ಯಲಕ್ಷ್ಮೀ ಧಾರಾವಾಹಿ ನಿರ್ದೇಶಕ ಗೌಡು ದರ್ಶನರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು, ಬಿಲ್ ಕೆರೂರದ ಸಿದ್ಧಲಿಂಗ ಶಿವಾಚಾರ್ಯರು, ಕೊಣ್ಣೂರದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಆಲಮಟ್ಟಿಯ ಡಾ. ವಿವೇಕ ದೇವರು, ಕಲ್ಮಠದ ಗುರುಪಾದ ಶಿವಾಚಾರ್ಯರು, ಮಾಜಿ ಸಚಿವ ಎಸ್. ಆರ್. ಪಾಟೀಲ, ಅಣವೀರಯ್ಯ ಪ್ಯಾಟಿಮಠ, ನಾನಾಸಾಹೇಬ ದೇಸಾಯಿ, ಹೊಳಬಸು ಬಾಳಶೆಟ್ಟಿ ಮತ್ತಿತರಿದ್ದರು.ಗುರುರಾಜ ಲೂತಿ ನಿರೂಪಿಸಿದರು. ಎಚ್. ಬಿ. ಅರಸುಣಗಿ ಸ್ವಾಗತಿಸಿದರು. ಶ್ರೀಶೈಲ ನಂದ್ಯಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ