ಸೇವಾ ನ್ಯೂನತೆ- ಹುಬ್ಬಳ್ಳಿಯ ಎಸ್‌ಎಸ್‌ವಿ ಶೆಲ್ಟರ್ಸ್‌ಗೆ ದಂಡ

KannadaprabhaNewsNetwork | Updated : May 09 2025, 12:55 AM IST
ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಎಸ್‌.ಎಸ್‌.ವಿ. ಶೆಲ್ಟರ್ಸ್‌ಗೆ ದಂಡ ವಿಧಿಸಿ ಇಲ್ಲಿಯ ಗ್ರಾಹಕರ ಆಯೋಗ ಆದೇಶಿಸಿದೆ. ಆದೇಶದ 2 ತಿಂಗಳ ಒಳಗಾಗಿ ಕಟ್ಟಡದ ಕಾಮಗಾರಿ ಪೂರ್ತಿಗೊಳಿಸಿ ದೂರುದಾರರಿಗೆ ಸ್ವಾಧೀನತೆ ಕೊಡಬೇಕು ಎಂದು ಆಯೋಗ ಆದೇಶಿಸಿದೆ.
Follow Us

ಧಾರವಾಡ: ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಎಸ್‌.ಎಸ್‌.ವಿ. ಶೆಲ್ಟರ್ಸ್‌ಗೆ ದಂಡ ವಿಧಿಸಿ ಇಲ್ಲಿಯ ಗ್ರಾಹಕರ ಆಯೋಗ ಆದೇಶಿಸಿದೆ.

ಹುಬ್ಬಳ್ಳಿಯ ವಿದ್ಯಾನಗರದ ಶೈಲಾ ಸಿದಗಂಟಿ ಅವರು ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಛಿಸಿದ್ದರು. ಎಸ್‌.ವಿ.ಎಸ್‌. ಶೆಲ್ಟರ್ಸ್‌ನವರು ಹುಬ್ಬಳ್ಳಿಯ ಸೆಂಟ್ರಲ್ ಮಾಲ್‌ನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿರುವ ಬಗ್ಗೆ ಜಾಹೀರಾತು ಕೊಟ್ಟಿದ್ದರು. ಅದರ ಆಧಾರದ ಮೇಲೆ ಸಂಪರ್ಕಿಸಿ ಅವರ ವಾಣಿಜ್ಯ ಮಳಿಗೆಯಲ್ಲಿ 3ನೇ ಮಹಡಿಯಲ್ಲಿ ಶಾಪ್ ನಂ.35ನ್ನು ₹7.85 ಲಕ್ಷಕ್ಕೆ ಖರೀದಿಸಿದ್ದರು. ಈ ಬಗ್ಗೆ ಒಪ್ಪಂದವೂ ಆಗಿತ್ತು. ಒಪ್ಪಂದದಂತೆ ನಿಗದಿತ ಅವಧಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಿಲ್ಲ. ಮಳಿಗೆಯ ಕಟ್ಟಡ ಪೂರ್ತಿಗೊಳಿಸದೇ ಮತ್ತು ಕಬ್ಜಾ, ಖರೀದಿ ಪತ್ರವನ್ನು ಮಾಡಿಕೊಡಲಿಲ್ಲ. ಅಂತಹ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಂದು ದೂರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಹಣ ಪಡೆದು ಎದುರುದಾರರು ಎಸ್.ಎಸ್.ವಿ. ಶೆಲ್ಟರ್ಸ್‌ನವರು ಒಪ್ಪಂದ ಮಾಡಿಕೊಂಡು ಖರೀದಿ ಪತ್ರ ಮಾಡಿಕೊಟ್ಟಿದ್ದಾರೆ. ಹಲವಾರು ವರ್ಷ ಕಳೆದರೂ ಮಳಿಗೆ ನಂ. 35ರ ಕೆಲಸ ಕಾರ್ಯ ಮಾಡಿ ಸ್ವಾಧೀನತೆ ಕೊಟ್ಟಿಲ್ಲ. ಅಂತಹ ಎದುರುದಾರರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಂದು ತೀರ್ಪು ನೀಡಲಾಗಿದೆ. ಆದೇಶದ 2 ತಿಂಗಳ ಒಳಗಾಗಿ ಕಟ್ಟಡದ ಕಾಮಗಾರಿ ಪೂರ್ತಿಗೊಳಿಸಿ ದೂರುದಾರರಿಗೆ ಸ್ವಾಧೀನತೆ ಕೊಡಬೇಕು ಎಂದು ಆಯೋಗ ಆದೇಶಿಸಿದೆ. ಅಲ್ಲದೇ ಕರಾರು ಪತ್ರದ ಪ್ರಕಾರ ಡಿಸೆಂಬರ್ 2016ರಿಂದ ತಿಂಗಳಿಗೆ ₹4,700 ಬಾಡಿಗೆಯನ್ನು ಲೆಕ್ಕ ಹಾಕಿ ಕೊಡಬೇಕು. ಅನನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ₹50 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ₹10 ಸಾವಿರ ನೀಡುವಂತೆ ಆಯೋಗ ಆದೇಶಿಸಿದೆ.