ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾರ್ಯಕ್ರಮ ನಡೆದ ಜ್ಞಾನಭಾರತಿ ವಾರ್ಡ್ನ ಮಲ್ಲತ್ತಹಳ್ಳಿ ಮೈದಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನ ಇಡೀ ದಿನ ಸ್ಥಳೀಯ ನಿವಾಸಿಗಳಿಂದ ತುಂಬಿತ್ತು. ಭಾನುವಾರ ಸಂಜೆ ನಡೆದ ‘ಶಿವರಾತ್ರಿ’ ಚಿತ್ರಕಲಾ ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಮಕ್ಕಳು ಪಾಲ್ಗೊಂಡು ಶಿವನ ವಿವಿಧ ಭಂಗಿಯ ಚಿತ್ರವನ್ನು ಬರೆದರು. ಬಳಿಕ ನಡೆದ ‘ಸಾಂಪ್ರದಾಯಿಕ ಉಡುಗೆ’ ಫ್ಯಾಷನ್ ಶೋನಲ್ಲಿ ಮಕ್ಕಳು ಬಗೆಬಗೆಯ ಧಿರಿಸಿನಲ್ಲಿ ಮಿಂಚಿದರು. ಇದಾದ ನಂತರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರು ಶಾಸಕ ಮುನಿರತ್ನ ಅವರಿಂದ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಬಳಿ ಸಾಗರ್ ತುರುವೆಕೆರೆ ಹಾಗೂ ರಜತ್ ನಾಯಕ್ ಅವರ ಕಾರ್ಯಕ್ರಮ ಹಾಸ್ಯ ಸಂಜೆ ನೆರೆದವರನ್ನು ರಂಜಿಸಿತು. ಮುಂದುವರಿದು ರಾತ್ರಿ 10ರವರೆಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮಾಜಿ ಸಚಿವ, ಶಾಸಕ ಮುನಿರತ್ನ ಅವರು ಬಹುಮಾನ ವಿತರಿಸಿದರು. ಬಳಿಕ ಮಾತನಾಡಿ, ಮೂರು ದಿನಗಳ ಕಾರ್ಯಕ್ರಮ ಸಂಭ್ರಮದಿಂದ ನಡೆದಿದ್ದು, ಜನತೆ ಸಂತಸಗೊಂಡಿರುವುದು ನನಗೂ ಖುಷಿಯಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ನಿರಂತರ ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದೆಯೂ ಹತ್ತು ಹಲವು ಯೋಜನೆಗಳನ್ನು ತಂದು ಜನತೆಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ನಮ್ಮನ್ನು ನಿರಂತರವಾಗಿ ಬೆಂಬಲಿಸುವಂತೆ ಕೋರಿದರು.
--
ಕಳೆದ ಮೂರು ದಿನಗಳಿಂದ ನಡೆದ ಆರ್.ಆರ್.ನಗರ ಸಂಭ್ರಮದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮಾಜಿ ಸಚಿವ, ಶಾಸಕ ಮುನಿರತ್ನ ಅವರು ಬಹುಮಾನ ವಿತರಿಸಿದರು.