ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಕಸರತ್ತು ಚಿತ್ರದುರ್ಗದಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಹೊಸ ವರ್ಷದ ಆರಂಭದ ದಿನವಾದ ಸೋಮವಾರ ಆಕಾಂಕ್ಷಿಗಳು ಮೂರು ಕಡೆ ಸಭೆ ನಡೆಸುವುದರ ಮೂಲಕ ಸಮತದಾರರಿಗೆ ಶುಭ ಕೋರುವುದರ ಜೊತೆಗೆ ಆಕಾಂಕ್ಷಿಗಳು ಎನ್ನುವ ಸಂಗತಿ ಪರೋಕ್ಷವಾಗಿ ರವಾನಿಸಿದರು. ಪತ್ರಕರ್ತರ ಭವನದಲ್ಲಿ ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಕಚೇರಿಯಲ್ಲಿ ನೇರಲಗುಂಟೆ ರಾಮಪ್ಪ, ಪ್ರವಾಸಿ ಮಂದಿರದಲ್ಲಿ ಡಾ.ಬಿ.ತಿಪ್ಪೇಸ್ವಾಮಿ ಸಭೆ ಮಾಡಿ ಗಮನ ಸೆಳೆದರು.
ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖ್ಯವಲ್ಲ. ಪಕ್ಷದ ಗೆಲುವು ಮಾತ್ರ ಮುಖ್ಯ. ಈ ಉದ್ದೇಶದಿಂದ ಪಕ್ಷವನ್ನು ಪುನಃ ತಳಮಟ್ಟದಿಂದ ಸಂಘಟಿಸುವ ಕಾರ್ಯ ನಡೆಯುತ್ತಿದೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜತೆಗೆ ಪಕ್ಷದ ಹೈಕಮಾಂಡ್ ಜಿಲ್ಲೆಯ ಮೂವರಿಗೆ ಪದಾಧಿಕಾರಿಗಳ ಹುದ್ದೆ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದರು.
ಸಚಿವ ಮಹಾದೇವಪ್ಪ ಲೋಕಸಭೆ ಕ್ಷೇತ್ರದ ವೀಕ್ಷಕರಾಗಿ ಬಂದಿದ್ದಾಗ ಹೊರಗಿನವರು ಎಂದು ಯಾವ ಕಾರ್ಯಕರ್ತರು ವಿರೋಧ ಮಾಡಿಲ್ಲ. ಅಲ್ಲಿ ಗಲಾಟೆ ಮಾಡಿದವರಲ್ಲಿ ನಮ್ಮ ಕಾರ್ಯಕರ್ತರು ಇರಲಿಲ್ಲ. ಲೋಕಸಭೆ ಚುನಾವಣೆಗೆ ಬಹಳಷ್ಟು ಜನ ಆಕಾಂಕ್ಷಿಗಳಿದ್ದೇವೆ. ಇಲ್ಲಿ ಯಾರು ಅಭ್ಯರ್ಥಿ ಎನ್ನುವುದಕ್ಕಿಂತ ಪಕ್ಷ ಗೆಲ್ಲಬೇಕು. ಕಾಂಗ್ರೆಸ್ ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಲಕ್ಷ್ಮೀಕಾಂತ್, ಪ್ರಕಾಶ್ ರಾಮನಾಯ್ಕ್, ಎನ್.ಡಿ.ಕುಮಾರ್ ಇದ್ದರು.