ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯುತ್ ಪೂರೈಕೆ ದೋಷದಿಂದಾಗಿ ಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಂತಿತ್ತು. ಇದರ ಪರಿಣಾಮ ಕಚೇರಿಗಳಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೊರಡುವ ಸಮಯವಾದ ಸಂಜೆ 5.33ಕ್ಕೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತು. ಆದರೆ ನಾಗಸಂದ್ರ- ಆರ್.ವಿ. ರಸ್ತೆ ನಡುವೆ ಮೆಟ್ರೋ ಸೇವೆ ಎಂದಿನಂತೆ ಇತ್ತು. ಅಲ್ಲಿಂದ ರಾತ್ರಿ 7.5ರವರೆಗೆ ರೈಲುಗಳ ಓಡಾಟ ಇರಲಿಲ್ಲ. ಮಳೆ, ಮೆಟ್ರೋ ಸೇವೆ ಸ್ಥಗಿತಗೊಂಡ ಕಾರಣಗಳಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಮುಖ್ಯವಾಗಿ ಆರ್.ವಿ. ರಸ್ತೆಗೆ ಬಂದಿಳಿಯುವ ಪ್ರಯಾಣಿಕರು ಹೋಗಬೇಕಾದ ನಿಗದಿತ ಸ್ಥಳ ತಲುಪಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು.
ಈ ಮಾರ್ಗಗಳ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಜಮಾವಣೆ ಆಗಿದ್ದರು. ರೈಲು ಸಂಚಾರ ಸ್ಥಗಿತಗೊಂಡ ಬಗ್ಗೆ, ಮರು ಆರಂಭವಾಗುವ ಕುರಿತಂತೆ ಮೆಟ್ರೋ ಸಿಬ್ಬಂದಿ, ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಲ್ಲಿ ಮೆಟ್ರೋ ಸಿಬ್ಬಂದಿ ಜೊತೆ ವಾಗ್ವಾದಗಳೂ ನಡೆದವು. ಈ ಸಂಬಂಧ ಹಲವರು ‘ಎಕ್ಸ್’ ಮಾಡಿ ಬಿಎಂಆರ್ಸಿಲ್ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಕನ್ನಡದಲ್ಲಿ ಮೆಟ್ರೋ ಸ್ಥಗಿತದ ಬಗ್ಗೆ ಮಾಹಿತಿ ನೀಡದ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು. ‘ಬಿಎಂಆರ್ಸಿಎಲ್ ಪ್ರಕಾರ ಜನರ ಹಣ ಮತ್ತು ಸಮಯಕ್ಕೆ ಬೆಲೆಯೇ ಇಲ್ಲ. ಕೊನೆಪಕ್ಷ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಸಂಪರ್ಕ ಬಸ್ಗಳನ್ನಾದರೂ ಕಲ್ಪಿಸಿ’ ಎಂದು ಒತ್ತಾಯಿಸಿದರು.
ಮೆಟ್ರೋ ಇಲ್ಲ. ಬನಶಂಕರಿಯಲ್ಲಿ ಎರಡು ತಾಸುಗಳಿಂದ ಬಸ್ ಕೂಡ ಬರುತ್ತಿಲ್ಲ ಎಂದು ಸುದರ್ಶನ್ ಇಳಂಗೋವನ್‘ಎಕ್ಸ್’ನಲ್ಲಿ ಬೇಸರ ಹೊರಹಾಕಿದರು. ‘ಅರ್ಧಗಂಟೆಯಿಂದ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದೇವೆ’ ಎಂದು ಬೇಸರಿಸಿದ್ದಾರೆ.