ಆನೆಗೊಂದಿ ಉತ್ಸವಕ್ಕೆ ಗ್ರೀನ್‌ ಸಿಗ್ನಲ್‌

KannadaprabhaNewsNetwork | Published : Mar 5, 2025 12:36 AM

ಸಾರಾಂಶ

ವಿಜಯನಗರ ಸಾಮ್ಯಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಈ ಮಧ್ಯೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ತೆರಳಿ ಆನೆಗೊಂದಿ ಉತ್ಸವ ಆಚರಿಸಲು ಅನುದಾನ ನೀಡಬೇಕು ಮತ್ತು ಕಳೆದ ವರ್ಷದ ಉತ್ಸವದ ಬಾಕಿ ಹಣ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ:

ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿಸಿದೆ.

ಕಳೆದ ವರ್ಷ ಉತ್ಸವ ಆಚರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವರ್ಷ ಆಚರಣೆಗೆ ಹಿಂದೇಟು ಹಾಕಿತ್ತು. ಗಂಗಾವತಿ ಅಖಂಡ ತಾಲೂಕಿನಲ್ಲಿ ಬರುವ ಕನಕಗಿರಿ ಉತ್ಸವಕ್ಕೆ ಮುಂದಾಗಿ, ಆನೆಗೊಂದಿ ಉತ್ಸವ ಕಡೆಗಣಸುತ್ತಿದ್ದಾರೆಂಬ ಕೂಗು ಕೇಳಿ ಬಂದಿತ್ತು. ಸ್ಥಳೀಯ ಶಾಸಕರು, ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆಂಬ ಆರೋಪ ಮಾಡಿದ್ದರು. ಕಳೆದ ಬಾರಿ ಆನೆಗೊಂದಿ ಉತ್ಸವ ನಿಗದಿಪಡಿಸಿದ ಅನುದಾನಕ್ಕಿಂತ ಹೆಚ್ಚು ವ್ಯಯಿಸಲಾಗಿದೆ ಎಂಬ ಕಾರಣಕ್ಕೆ ಈ ಬಾರಿ ಉತ್ಸವ ಕೈಬಿಡಲು ಚಿಂತನೆ ನಡೆದಿದೆ ಎನ್ನುವ ಮಾತುಗಳು ಕೆಳಿ ಬಂದಿದ್ದವು.

ವಿಜಯನಗರ ಸಾಮ್ಯಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಈ ಮಧ್ಯೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ತೆರಳಿ ಆನೆಗೊಂದಿ ಉತ್ಸವ ಆಚರಿಸಲು ಅನುದಾನ ನೀಡಬೇಕು ಮತ್ತು ಕಳೆದ ವರ್ಷದ ಉತ್ಸವದ ಬಾಕಿ ಹಣ ನೀಡಬೇಕೆಂದು ಮನವಿ ಮಾಡಿದ್ದರಿಂದ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಬಾಕಿ ಚುಕ್ತಾ:

ಕಳೆದ ವರ್ಷ ಆನೆಗೊಂದಿ ಉತ್ಸವಕ್ಕೆ ಖರ್ಚು ಮಾಡಿದ್ದ ಬಾಕಿ ಹಣವನ್ನು ಸರ್ಕಾರ ನೀಡಲು ಮುಂದಾಗಿದೆ ಎನ್ನಲಾಗಿದೆ. ₹ 5 ಕೋಟಿ ಬಾಕಿ ಇದ್ದಿದ್ದರಿಂದ ಉತ್ಸವದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಲೆಯುತ್ತಿದ್ದರು. ಈಗ ಬಾಕಿ ಚುಕ್ತಾ ಮಾಡುತ್ತಿದ್ದು ಮತ್ತೆ ಉತ್ಸವಕ್ಕೆ ಕಳೆ ಬರಲಿದೆ.

ಇದೀಗ ಉತ್ಸವ ಆಚರಣೆಗೆ ಸಮ್ಮಿತಿಸಿದರೆ ಸಾಲದು, ಶೀಘ್ರ ದಿನಾಂಕ ನಿಗದಿಪಡಿಸಿ ಸಿದ್ಧತೆ ಕೈಗೊಳ್ಳಬೇಕೆಂದು ಕಲಾವಿದರು, ಸಾಹಿತಿಗಳು ಒತ್ತಾಯಿಸಿದ್ದಾರೆ.

ಗತವೈಭವದ ಉತ್ಸವ:

ಆನೆಗೊಂದಿ ಉತ್ಸವವನ್ನು ಗತವೈಭವ ಸಾರುವ ರೀತಿಯಲ್ಲಿ ಆಚರಿಸಲಾಗುವುದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಉತ್ಸವದ ಕುರಿತು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶೀಘ್ರ ಸಭೆ ನಡೆಸಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಬಸವರಾಜ್ ಕ್ಯಾವಟರ್ ಉಪಸ್ಥಿತರಿದ್ದರು.

ಐತಿಹಾಸಿಕ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಳೆದ ವರ್ಷದ ಬಾಕಿ ಅನುದಾನ ಬಿಡುಗಡೆ ಮಾಡುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಉತ್ಸವದ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Share this article