ಮೃತರ ಖಾತೆಗೂ ಗೃಹಲಕ್ಷ್ಮಿ ಹಣ; ವಾಪಸಾತಿಗೆ ಕಾರ್ಯಾಚರಣೆ

KannadaprabhaNewsNetwork |  
Published : Aug 26, 2026, 02:30 AM IST
AI | Kannada Prabha

ಸಾರಾಂಶ

ತಾಲೂಕಿನಲ್ಲಿ ಮೃತ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರಕ್ಕೆ ವಾಪಸ್ ಪಡೆಯುವ ಕಾರ್ಯಾಚರಣೆ ಚುರುಕುಗೊಂಡಿದೆ.

ಸತ್ತವರ ಖಾತೆಗೆ ಗೃಹಲಕ್ಷ್ಮಿ ಹಣ; ಅಂಕೋಲಾದಲ್ಲಿ 352 ಪ್ರಕರಣ ಪತ್ತೆ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನಲ್ಲಿ ಮೃತ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರಕ್ಕೆ ವಾಪಸ್ ಪಡೆಯುವ ಕಾರ್ಯಾಚರಣೆ ಚುರುಕುಗೊಂಡಿದೆ. ಫಲಾನುಭವಿಗಳು ಮೃತಪಟ್ಟ ಬಳಿಕವೂ ಅವರ ಖಾತೆಗೆ ಹಣ ಜಮೆಯಾಗಿರುವುದು ಪತ್ತೆಯಾಗಿದ್ದು, ಕೆಲ ಪ್ರಕರಣಗಳಲ್ಲಿ ಮೃತರ ಕುಟುಂಬದವರು ಹಣವನ್ನು ಹಿಂಪಡೆದು ಬಳಸಿಕೊಂಡಿರುವುದೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇದೀಗ ಅಂತಹ ಹಣವನ್ನು ಸರ್ಕಾರಕ್ಕೆ ಮರುಪಾವತಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತಪಟ್ಟ ಬಳಿಕವೂ ಎಂಟು ತಿಂಗಳವರೆಗೆ ಅವರ ಖಾತೆಗೆ ಹಣ ಜಮೆಯಾಗಿರುವ ಕುರಿತು ನಡೆದ ಮೊದಲ ಹಂತದ ಪರಿಶೀಲನೆಯಲ್ಲಿ 116 ಮೃತ ಫಲಾನುಭವಿಗಳ ಹೆಸರು ಪತ್ತೆಯಾಗಿತ್ತು. ಈ ಪೈಕಿ 16 ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲಾಗಿದ್ದು, ₹1.16 ಲಕ್ಷವನ್ನು ವಸೂಲಿ ಮಾಡಿ ಕೆ2 ಚಲನ್ ಮೂಲಕ ಸರ್ಕಾರಕ್ಕೆ ಮರುಪಾವತಿಸಲಾಗಿದೆ.

ಇದೀಗ ಎರಡನೇ ಹಂತದ ಪರಿಶೀಲನೆಯಲ್ಲಿ ಮತ್ತೆ 236 ಮೃತ ಫಲಾನುಭವಿಗಳ ಹೆಸರು ಪತ್ತೆಯಾಗಿದೆ. ಈ ಪ್ರಕರಣಗಳಲ್ಲಿಯೂ ಕೆಲ ಮೃತ ಫಲಾನುಭವಿಗಳ ಕುಟುಂಬದವರು ಖಾತೆಗೆ ಜಮೆಯಾದ ಹಣವನ್ನು ಹಿಂಪಡೆದು ಖರ್ಚು ಮಾಡಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ ಹಣದ ವಸೂಲಾತಿ ಹಾಗೂ ಮೃತ ಫಲಾನುಭವಿಗಳ ಖಾತೆಗಳಿಗೆ ಮುಂದಿನ ಕಂತು ಜಮೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರ ಹುಡುಕಾಟಕ್ಕೆ ಫೀಲ್ಡ್‌ಗೆ ಇಲಾಖೆ:

ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆ ಸರ್ಕಾರ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸುತ್ತಿದೆ. ಇದರ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಳಮಟ್ಟದಲ್ಲಿ ಮೃತರ ಮಾಹಿತಿಯನ್ನು ಸಂಗ್ರಹಿಸಿ ಗೃಹಲಕ್ಷ್ಮಿ ಪೋರ್ಟಲ್‌ನಲ್ಲಿ ದಾಖಲಿಸುವ ಕಾರ್ಯ ಕೈಗೊಂಡಿದೆ.

ಮರಣ ಪ್ರಮಾಣಪತ್ರಕ್ಕಾಗಿ ಕಾಯದೇ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮರಣ ದೃಢೀಕರಣದ ಮಾಹಿತಿ ಪಡೆದು ಮೃತರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಜಮೆಯಾಗುವುದನ್ನು ತಡೆಗಟ್ಟಲಾಗುತ್ತಿದೆ. ಇ-ಜನ್ಮ ಪೋರ್ಟಲ್‌ನಲ್ಲಿ ಮರಣದ ಮಾಹಿತಿ ದಾಖಲಾಗದೆ ಇರುವುದೂ ಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಮುಂದುವರಿಯಲು ಪ್ರಮುಖ ಕಾರಣವಾಗಿರುವುದು ಇಲಾಖೆಯ ಪರಿಶೀಲನೆಯಲ್ಲಿ ಕಂಡುಬಂದಿದೆ.ಹಣ ಹಿಂಪಡೆದಿದ್ದರೆ ವಸೂಲಿಗೆ ಕ್ರಮ:

ಮೃತರ ಖಾತೆಗೆ ಹಣ ಜಮೆಯಾದ ಬಳಿಕ ಅದನ್ನು ಕುಟುಂಬದವರು ಅಥವಾ ಇತರರು ಹಿಂಪಡೆದಿರುವ ಸಾಧ್ಯತೆಯ ಹಿನ್ನೆಲೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಲೀಡ್ ಬ್ಯಾಂಕ್‌ಗೆ ಮಾಹಿತಿ ನೀಡಿ, ಸರ್ಕಾರಕ್ಕೆ ಹಣ ಮರುಜಮೆ ಮಾಡುವಂತೆ ಸೂಚಿಸಲು ಇಲಾಖೆ ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಹಕಾರದೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುವುದನ್ನು ನಿಲ್ಲಿಸುವ ಕಾರ್ಯ ನಡೆಯುತ್ತಿದೆ. ಹಣ ಜಮೆಯಾಗಿರುವ ಖಾತೆಗಳನ್ನು ತಡೆಹಿಡಿದು, ಆ ಮೊತ್ತವನ್ನು ಮರಳಿ ಸರ್ಕಾರಕ್ಕೆ ಜಮಾ ಮಾಡುವಂತೆ ಲೀಡ್ ಬ್ಯಾಂಕ್‌ಗೆ ಪತ್ರ ಬರೆಯಲಾಗಿದೆ. ಮುಂದೆ ಗ್ರಾಮಗಳಲ್ಲಿ ಸಂಭವಿಸುವ ಮರಣಗಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ದೃಢೀಕರಿಸಿ, ತಕ್ಷಣ ಗೃಹಲಕ್ಷ್ಮಿ ಪೋರ್ಟಲ್‌ನಲ್ಲಿ ದಾಖಲಿಸುವ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಭಟ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
ಕುಷ್ಟಗಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ