ಹಾನಗಲ್ಲ: ಹಾನಗಲ್ಲ ತಾಲೂಕಿನ ೯೭೮೫ ಅಡಕೆ ಬೆಳೆಗಾರರಿಗೆ ೨೦೨೩-೨೪ನೇ ಸಾಲಿನ ಬೆಳೆವಿಮೆ ₹ ೧೪.೭೫ ಕೋಟಿ ಬಿಡುಗಡೆಯಾಗಿದ್ದು, ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆ ಆಗುತ್ತಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಮಂಜುನಾಥ ಬಣಕಾರ ತಿಳಿಸಿದ್ದಾರೆ.ಹಾನಗಲ್ಲ ತಾಲೂಕಿನಲ್ಲಿ ಕಳೆದ ವರ್ಷ ೨೪೫೦೦ ಎಕರೆ ಅಡಕೆ ಬೆಳೆಗೆ ೯೭೮೫ ರೈತರು ಬೆಳೆವಿಮೆ ಪಾವತಿಸಿದ್ದರು. ಹಲವು ತಿಂಗಳುಗಳಿಂದ ಬೆಳೆವಿಮೆ ಬಾರದೆ ರೈತರು ಕಾಯುತ್ತಿದ್ದರು. ಈಗ ಬೆಳೆ ವಿಮೆ ಬಿಡುಗಡೆಯಾಗಿ ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ₹ ೧೪.೭೫ ಕೋಟಿ ಬಿಡುಗಡೆಯಾಗಿದೆ.ಹಾನಗಲ್ಲ ತಾಲೂಕಿನಲ್ಲಿ ಒಟ್ಟು ೧೪೬೦೦ ಹೆಕ್ಟೇರ್ ತೋಟಗಾರಿಕಾ ಪ್ರದೇಶವಿದೆ. ಇದರಲ್ಲಿ ೧೦೨೦೦ ಹೆಕ್ಟೇರ್ ಅಡಕೆ, ೩೨೪೭ ಹೆಕ್ಟೇರ್ ಮಾವು, ೮೧ ಹೆಕ್ಟೇರ್ ಚಿಕ್ಕು, ೧೫ ಹೆಕ್ಟೇರ್ ಪಪ್ಪಾಯಿ, ೧೫೦೦ ಹೆಕ್ಟೇರ್ ಬಾಳೆ, ೯೧೫ ಹೆಕ್ಟೇರ್ ಶುಂಠಿ ಉಳಿದಂತೆ ಹೂವು ಹಾಗೂ ತರಕಾರಿ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ಕೃಷಿ ವರ್ಷದಲ್ಲಿ ಅತಿವೃಷ್ಟಿಯಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಅಂತಹ ಹಾನಿ ಕಂಡು ಬರದಿದ್ದರೂ ಕೂಡ, ಹೂವು ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಅಂದಾಜು ೧೦ ಹೆಕ್ಟೇರ್ ಪ್ರದೇಶದ ಹೂವು ಹಾಗೂ ತರಕಾರಿ ಬೆಳೆಗಳು ಹಾನಿಯಾದ ವರದಿ ಇದೆ. ಕಂಚಿನೆಗಳೂರು, ಮಾರನಬೀಡ ಪ್ರದೇಶದಲ್ಲಿ ಈ ಬೆಳೆಗಳು ಜಲಾವೃತವಾಗಿ ಹಾನಿಗೊಳಗಾದ ವರದಿಯಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಅಡಕೆ ಬೆಳೆಗೆ ಬೆಳೆವಿಮೆ ಮಂಜೂರಾಗಿದೆ. ತಾಂತ್ರಿಕ ಕಾರಣಗಳಿಂದ ಸ್ವಲ್ಪ ತಡವಾಗಿ ಬೆಳೆ ವಿಮೆ ಬಿಡುಗಡೆಯಾಗಿದೆ. ನಾವು ನಮ್ಮ ಪಾಲಿನ ಎಲ್ಲ ಮಾಹಿತಿಯನ್ನು ಸಕಾಲಿಕವಾಗಿ ವರದಿ ಮಾಡಿದ್ದೇವು. ಈಗ ಬೆಳೆವಿಮೆ ತುಂಬಿದ ಎಲ್ಲ ರೈತರಿಗೆ ಆಯಾ ಗ್ರಾಮ ಪಂಚಾಯತ್ವಾರು ಹವಾಮಾನ ಆಧಾರಿತ ಬೆಳೆ ವಿಮೆ ಮಂಜೂರಾಗಿದೆ ಹಾನಗಲ್ಲ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಹೇಳಿದರು.