ಕನ್ನಡಪ್ರಭ ವಾರ್ತೆ, ತರೀಕೆರೆ
ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆ ಮಳೆ 818.2 ಎಂ.ಎಂ ಇತ್ತು, ಆದರೆ ಪ್ರಸ್ತುತ 1056.7 ಎಂ.ಎಂ ಮಳೆಯಾಗಿದ್ದು ಶೇ.29 ರಷ್ಟು ಹೆಚ್ಚು ಮಳೆ ಬಿದ್ದು ಬಹುತೇಕ ಕೆರೆಗಳು ತುಂಬಿವೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಬಿ.ಎಲ್.ಮಾಹಿತಿ ನೀಡಿದ್ದಾರೆ.ಕೃಷಿ ಬೆಳೆಗಳಾದ ರಾಗಿಗೆ ಉತ್ತಮ ಮಳೆ ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿದೆ. ಅಲ್ಲದೆ ಹೆಚ್ಚು ಮಳೆಯಾಗಿರುವುದರಿಂದ ಭೂಮಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಿಗೆ ಬೇಸಿಗೆ ಹಂಗಾಮಿನಲ್ಲಿ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ. ಇದರಿಂದ ತೋಟಗಾರಿಕೆ ಬೆಳೆಗಳಿಗೆ ಬೇಸಿಯಲ್ಲೂ ತುಂಬಾ ಅನುಕೂಲ ವಾಗಲಿದೆ ಎಂದರು.ಅಜ್ಜಂಪುರ ತಾಲೂಕಿಗೆ ಸಂಬಂಧಿಸಿದಂತೆ ವಾಡಿಕೆ ಮಳೆ 601.09 ಎಂ.ಎಂ ಇದ್ದು, ಈ ವರೆಗೆ 705.8 ಎಂ.ಎಂ ಮಳೆ ಆಗಿದೆ.ಅಂದರೆ ಶೇ. 17.8ರಷ್ಟು ಮಲೆ ಹೆಚ್ಚಾಗಿದೆ. ಉತ್ತಮ ಮಳೆ ಆಗಿರುವುದರಿಂದ ರೈತರು ಹಿಂಗಾರು ಹಂಗಾಮಿಗೆ ಕಡಲೆ, ಹಿಂಗಾರು ಜೋಳ ಬಿತ್ತನೆ ಮಾಡಲು ತಮ್ಮ ಹೊಲಗಳನ್ನು ಹದ ಮಾಡಲು ತೊಡಗಿಕೊಂಡಿದ್ದು, ತೇವಾಂಶ ಹೆಚ್ಚಿರುವುದರಿಂದ ಮುಂದಿನ ವಾರಗಳಲ್ಲಿ ಪೂರ್ಣಪ್ರಮಾಣದ ಬಿತ್ತನೆ ಮಾಡಬಹುದು ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ತೋಟ, ಹೊಲಗಳಲ್ಲಿ ನೀರು ನಿಂತಿರುವ ಕಡೆ, ತೇವಾಂಶ ಹೆಚ್ಚಿ ಕೆಲವೆಡೆಗಳಲ್ಲಿ ರೋಗ ಸಂಭವಿಸುವ ಲಕ್ಷಣಗಳು ಇರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ, ಬಸಿಗಾಲುವೆ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು, ಗಾಳಿ ಯಾಡುವಂತೆ ಮಾಡಲು ಅಂತರ ಬೆಳೆಯಾಗಿ ಹುರುಳಿ, ಅಲಸಂದೆ, ಬಟಾಣಿ ಬೆಳೆಯಬೇಕು. ರೋಗಗಳ ತೀವ್ರತೆ ಕಂಡು ಬಂದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಔಷಧ ಸಿಂಪರಣೆ ಮಾಡಬೇಕು. ಸಾವಯವ ಗೊಬ್ಬರ ಮತ್ತು ಕೋಕನೆಟ್ ತೆಂಗಿನ ಕಾಯಿಲ್ ಕಿಟ್, ಬೇವಿನ ಹಿಂಡಿ, ಚೈವಿಕ ಗೊಬ್ಬರ ಬಯೋ ಇನ್ಯಾಕುಲರ್ ನ್ನು ರೈತರು ತಮ್ಮ ಹೊಲಗಳಿಗೆ ಹೆಚ್ಚಾಗಿ ಹಾಕಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.26ಕೆ.ಟಿಆರ್.ಕೆ.1ಃ ಉತ್ತಮ ಮಳೆಯಿಂದಾಗಿ ರಾಗಿ ಬೆಳೆ ಹಸಿರಿನಿಂದ ತುಂಬಿದೆ.