ಅಡಿಕೆಯೊಂದಿಗೆ ಬೇಡಿಕೆಯುಳ್ಳ ಉಪಬೆಳೆ ಬೆಳೆಯಿರಿ

KannadaprabhaNewsNetwork |  
Published : Jun 10, 2025, 06:55 AM ISTUpdated : Jun 10, 2025, 06:56 AM IST
ಫೋಟೋ ಜೂ.೯ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ವಿವಿಧ ಸಾಂಬಾರು ಬೆಳೆಗಳನ್ನು ಬೆಳೆಯುವ ಅವಕಾಶವಿದ್ದರೂ ರೈತರಲ್ಲಿ ಆಸಕ್ತಿಯ ಕೊರತೆ ಕಂಡುಬರುತ್ತಿದೆ

ಯಲ್ಲಾಪುರ: ರೈತರು ವಾಣಿಜ್ಯ ಬೆಳೆಯಾದ ಅಡಿಕೆಯೊಂದಕ್ಕೆ ಗಮನಹರಿಸದೇ ಸಾಕಷ್ಟು ಬೇಡಿಕೆಯುಳ್ಳ ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ,ಲವಂಗ, ಜಾಯಿಕಾಯಿ ಬೆಳೆಗಳನ್ನು ಕೂಡಾ ಉಪಬೆಳೆಯಾಗಿ ಆಸಕ್ತಿಯಿಂದ ಬೆಳೆಸಬಹುದಾಗಿದೆ ಎಂದು ಅಪ್ಪಂಗಳದ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಹೊನ್ನಪ್ಪ ಹೇಳಿದರು.

ಅವರು ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಉಚಗೇರಿಯ ಶ್ರೀವಜ್ರೇಶ್ವರಿ ದೇವಾಲಯದ ಆವರಣದಲ್ಲಿ ಶನಿವಾರ ಭಾರತೀಯ ಕೃಷಿ ಸಂಶೋದನಾ ಅನುಸಂಧಾನ ಪರಿಷತ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಸ್ಕೋಡ್‌ವೆಸ್ ಶಿರಸಿ ಮತ್ತು ಕೆ.ಎನ್.ಸಿ. ರೈತ ಉತ್ಪಾದಕರ ಸಂಸ್ಥೆ ಕುಂದರಗಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ರೈತರೊಂದಿಗೆ ಸಂವಾದ ಮತ್ತು ಚರ್ಚೆ ನಡೆಸಿ ರೈತರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ವಿವಿಧ ಸಾಂಬಾರು ಬೆಳೆಗಳನ್ನು ಬೆಳೆಯುವ ಅವಕಾಶವಿದ್ದರೂ ರೈತರಲ್ಲಿ ಆಸಕ್ತಿಯ ಕೊರತೆ ಕಂಡುಬರುತ್ತಿದೆ. ಆದ್ದರಿಂದ ರೈತರು ವೈವಿಧ್ಯಮಯ ಬೆಳೆಗಳನ್ನು ತಜ್ಞರ ಮಾರ್ಗದರ್ಶನದೊಂದಿಗೆ ವೈಜ್ಞಾನಿಕ ಆವಿಷ್ಕಾರಗಳ ಬಳಕೆಯೊಂದಿಗೆ ಬೆಳೆಯಲು ಮುಂದಾಗಬೇಕಿದೆ. ನಮ್ಮ ದೇಶವು ೪ ಬಿಲಿಯನ್ ಡಾಲರ್ ಮೊತ್ತದ ಮಸಾಲೆ ಬೆಳೆಗಳ ರಫ್ತಿನೊಂದಿಗೆ ವಿಶ್ವದಲ್ಲಿ ದಾಖಲೆಯ ಸ್ಥಾನ ಗಳಿಸಿದೆ. ಇಂತಹ ಸಂದರ್ಭದಲ್ಲಿ ರೈತರು ಗಮನಹರಿಸಿ ತಮ್ಮ ಬೆಳೆಗಳ ಉತ್ತಮ ಇಳುವರಿಗಾಗಿ ಸೂಕ್ತ ಪೋಷಕಾಂಶ ಬೆಳೆಗಳಿಗೆ ಪೂರೈಸಬೇಕಿದೆ. ಮುಖ್ಯವಾಗಿ ಅಡಿಕೆಗೆ ಆವರಿಸಿದ ಕೊಳೆರೋಗ ಮತ್ತು ಎಲೆಚುಕ್ಕೆ ರೋಗಗಳ ನಿವಾರಣೆಗಾಗಿ ಕೈಗೊಳ್ಳಬಹುದಾದ ಸರಳ ಮಾರ್ಗೋಪಾಯಗಳನ್ನು ವಿವರಿಸಿದರು.

ರೈತರು ತಮ್ಮ ತೋಟಗಳಲ್ಲಿ ಕಾಲುವೆ ಮತ್ತು ಬಸಿಗಾಲುವೆಗಳನ್ನು ಸಮರ್ಪಕವಾಗಿ ನಿರ್ಮಿಸಬೇಕು. ವಾತಾವರಣಕ್ಕೆನುಗುಣವಾದ ಬೆಳೆಯತ್ತ ಗಮನಹರಿಸಬೇಕು. ನಮ್ಮ ಕೃಷಿ ಸಂಶೋಧನಾ ಸಂಸ್ಥೆಯಿಂದ ಅಡಿಕೆಯೊಂದಿಗೆ ಬೆಳೆಯಬಹುದಾದ ಉಪಬೆಳೆಗಳ ಕುರಿತು ಅಗತ್ಯ ಮಾಹಿತಿ ಆಸಕ್ತರಿಗೆ ನೀಡಲಾಗುವುದು ಎಂದರು.

ಶಿರಸಿಯ ಕೃಷಿ ವಿಜ್ಞಾನ ಕೆಂದ್ರದ ಡಾ. ಅರ್ಜುನ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಅಡಿಕೆ ಮರಗಳಿಗೆ ಶಿಲೀಂಧ್ರದಿಂದ ೩ ರೀತಿಯ ಎಲೆಚುಕ್ಕೆ ರೋಗ ಆವರಿಸುತ್ತಿದೆ. ಗುಣಮಟ್ಟದ ಸುಣ್ಣ ಮತ್ತು ಮೈಲು ತುತ್ತಗಳಿಂದ ತಯಾರಿಸುವ ಬೋರ್ಡು ದ್ರಾವಣ ಸೂಕ್ತ ಕ್ರಮದಲ್ಲಿ ಸಿಂಪಡಿಸಬೇಕು. ಅಡಿಕೆಗೆ ಮಾರಕವಾಗಿರುವ ಬೇರುಹುಳು ಮತ್ತು ಕೊಳೆರೋಗದ ಹತೋಟಿಗೆ ಪ್ರತಿ ವರ್ಷವೂ ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ತಜ್ಞರ ಮೂಲಕ ಮಾಡಿಸಬೇಕು ಎಂದರು.

ಕೆವಿಕೆ ಯ ಮಂಜುನಾಥ ಸ್ವಾಗತಿಸಿ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಗುರುಮೂರ್ತಿ ಹೆಗಡೆ ಮತ್ತು ರಮೇಶ ರಾವ್ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ