ದೇಶ ಸುರಕ್ಷಿತವಾಗಿರಲು ಗಿಡ-ಮರ ಬೆಳೆಸಿ

KannadaprabhaNewsNetwork | Published : Dec 8, 2023 1:45 AM

ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶ ಮನುಷ್ಯನ ಆಸ್ತಿಗಳಾಗಿದ್ದು, ಇವುಗಳಿಗೆ ಎಲ್ಲಿಯವರೆಗೆ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿರುತ್ತದೆ. ಆದರೆ ಇವು ಇಂದು ಸುರಕ್ಷಿತವಾಗಿಲ್ಲ. ಆದರಿಂದ ಗಿಡಮರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕೊಲ್ಲಾಪುರದ ಕನೇರಿವಾಡಿ ಸಿದ್ಧಗಿರಿ ಮಹಾಸಂಸ್ಥಾನಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು. ಡಂಬಳ ಹೋಬಳಿಯ ಡೋಣಿ ಸಮೀಪದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಜರುಗಿದ ಕಪ್ಪತ್ತಗುಡ್ಡ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಡಂಬಳ: ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶ ಮನುಷ್ಯನ ಆಸ್ತಿಗಳಾಗಿದ್ದು, ಇವುಗಳಿಗೆ ಎಲ್ಲಿಯವರೆಗೆ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿರುತ್ತದೆ. ಆದರೆ ಇವು ಇಂದು ಸುರಕ್ಷಿತವಾಗಿಲ್ಲ. ಆದರಿಂದ ಗಿಡಮರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕೊಲ್ಲಾಪುರದ ಕನೇರಿವಾಡಿ ಸಿದ್ಧಗಿರಿ ಮಹಾಸಂಸ್ಥಾನಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ಡಂಬಳ ಹೋಬಳಿಯ ಡೋಣಿ ಸಮೀಪದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಜರುಗಿದ ಕಪ್ಪತ್ತಗುಡ್ಡ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚೆನ್ನೈದಂತಹ ಮಹಾನಗರದಲ್ಲಿ ಬೇಸಿಗೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೀರನ್ನು ನೀವೇ ತರಬೇಕು ಎಂದು ಬೋರ್ಡ್‌ ಹಾಕುತ್ತಾರೆ. ಇಂತಹ ಸ್ಥಿತಿ ಇಲ್ಲಿ ಬರಬಾರದು ಎಂದರೆ ಈಗಲೇ ಎಚ್ಚೆತ್ತು ಗಿಡ-ಮರಗಳನ್ನು ಬೆಳೆಸಬೇಕು ಎಂದರು.

ಕಪ್ಪತ್ತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿ ಮಾತನಾಡಿ, ದಿನೇ ದಿನೇ ವಾತಾವರಣ ಉಷ್ಣವಾಗುತ್ತಿದೆ. 15 ಜಿಲ್ಲೆಗಳಿಗೆ ಶುದ್ಧ ಹವೆ ನೀಡುವ ಕೇಂದ್ರವಾಗಿರುವ ಕಪ್ಪತ್ತಗುಡ್ಡವನ್ನು ಉಳಿಸಿ ಬೆಳೆಸಿದಾಗ ಬೆಳೆಗಳಿಗೆ ರೋಗ-ರುಜಿನ ಬರುವುದಿಲ್ಲ. ಜತೆಗೆ ಮಳೆಯ ಜತೆಗೆ ಉತ್ತಮ ಬೆಳೆ ಹೊಂದಲು ಸಾಧ್ಯ. ಈ ಹಿನ್ನೆಲೆ ಪ್ರತಿಯೊಬ್ಬರೂ ಸಮರೋಪಾದಿಯಲ್ಲಿ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದರು.

ಸ್ವೀಕರಿಸಲಾದ ಗೊತ್ತುವಳಿಗಳು: ಒಂದು ಸಾವಿರ ರೈತರು ಒಂದು ಎಕರೆ ಭೂಮಿಯಲ್ಲಿ ನಂದಿ ಹಾಗೂ ಗೋ ಆಧಾರಿತ ಪಾರಂಪರಿಕ ಸಾವಯವ ಕೃಷಿಯಲ್ಲಿ ತೊಡಗುವುದು.

ದೇಶಿ ಬೀಜಗಳ ಸಂಶೋಧನೆ ಸಂವರ್ಧನೆ ಸಂರಕ್ಷಣೆಗೆ ಆದ್ಯತೆ, ಅಡವಿ ಸಸ್ಯಗಳ ಸಂವರ್ದನೆ ಜತೆಗೆ ಸಂಶೋಧನೆಗೆ ಆದ್ಯತೆ, ನೈಸರ್ಗಿಕ ಎರೆಹುಳು ಅಭಿವೃದ್ಧಿ, ಕಪ್ಪತ್ತಗುಡ್ಡದ 80 ಸಾವಿರ ಎಕರೆ ಕಾಡುಪ್ರದೇಶ ಸಂರಕ್ಷಿಸಿಕೊಳ್ಳಲು ಯಾವುದೇ ಗಣಿಗಾರಿಕೆಗೆ ಆಸ್ಪದ ನೀಡದಂತೆ ಜನಜಾಗೃತಿಗೊಳಿಸುವುದು ಮತ್ತು ಗಣಿಗಾರಿಕೆಗೆ ಅನುಮತಿ ನೀಡದಂತೆ ಸರ್ಕಾರವನ್ನು ಆಗ್ರಹಿಸುವುದು.

ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಗಿಡಗಳನ್ನು ಬೆಳಸದೆ ಇದ್ದರೆ ರೈತರು ಬೆಳೆಯುವ ಬೆಳೆಗಳಿಗೆ ರೋಗ ಬಾಧೆಗಳು ಹೆಚ್ಚಾಗಲಿದೆ. ರೈತಾಪಿ ವರ್ಗ ಎಚ್ಚೆತ್ತುಕೊಂಡು ಗಿಡಗಳನ್ನು ಬೆಳಸಲು ಮುಂದಾಗಬೇಕು. ಅರಣ್ಯ ನಾಶದಿಂದ ನಮ್ಮ ಕೊಂಡಿಯಂತಿರುವ ಪ್ರಾಣಿ ಪಕ್ಷಿ ಸಂಕುಲ ಅಳವಿನಂಚಿನಲ್ಲಿ ಇವೆ. ಅವುಗಳನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಡಾ. ಅಶೋಕ ಆಲೂರ, ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ್, ಗ್ರಾಮೀಣ ವಿಶ್ವ ವಿದ್ಯಾಲಯ ಕುಲಪತಿ ವಿಶ್ವನಾಥ ಚಟಪಲ್ಲಿ ಮಾತನಾಡಿದರು.

ಡಾ. ಆರ್.ಆರ್. ಹಂಚಿನಾಳ, ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು. ಗಣೇಶಸಿಂಗ್ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇನು ಸಾಕಾಣಿಕೆ, ಹಲವು ಔಷಧಿ ಸಸ್ಯಗಳ ಮಾಹಿತಿಯನ್ನು ಮಳಿಗೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಗುರುನಾಥಗೌಡ ಓದುಗೌಡರ, ಡಾ. ಎಂ.ಎಸ್. ಉಪ್ಪಿನ, ದೇವೇಂದ್ರಪ್ಪ ಬೂಲವಟಗಿ, ಬಿ.ಎಸ್. ಅಂಗಡಿ, ದೇವರಡ್ಡಿ ಅಗಸಿನಕೊಪ್ಪ, ದೇವಪ್ಪ ಅರಹುಣಸಿ, ಅಶೋಕ ಸಂಕಣ್ಣವರ, ಗೋವಿಂದಪ್ಪ ಗೌಡಪ್ಪಗೋಳ, ಮಂಗಲಾ ನೀಲಗುಂದ, ಗೌಸುಸಾಬ್ ತಾಂಬೋಟಿ ಇದ್ದರು. ಸಿ.ಎಸ್. ಅರಸನಾಳ ಕಾರ್ಯಕ್ರಮ ನಿರೂಪಿಸಿದರು.