ಕನ್ನಡಪ್ರಭ ವಾರ್ತೆ ತಿಪಟೂರು
ಬೆಂಗಳೂರಿನ ಕರ್ನಾಟಕ ಔಷಧಿ ಸಸ್ಯಗಳ ಪ್ರಾಧಿಕಾರದ ಕೆ.ಎನ್. ಪ್ರಭು, ಮಾತನಾಡಿ ಗ್ರಾಮೀಣ ಭಾಗದಲ್ಲಿ ಹಿರೇಮದ್ದು ಎಂದು ಖ್ಯಾತಿ ಪಡೆದ ಅಶ್ವಗಂಧ ಅನೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಇದರ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಅದನ್ನು ಬೆಳೆಯುತ್ತಿಲ್ಲ. ಹಾಗಾಗಿ ಇಂದು ಅಶ್ವಗಂಧದ ಬಗ್ಗೆ ಕಾರ್ಯಾಗಾರ ಏರ್ಪಡಿಸಿ ರೈತರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಶ್ವಗಂಧ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಅದರಲ್ಲೂ ಕರೋನಾ ನಂತರ ಅಶ್ವಗಂಧ ಸೇರಿದಂತೆ ಅನೇಕ ಆಯುರ್ವೇದ ಬೆಳೆಗಳನ್ನು ಜನರು ತೆಗೆದುಕೊಳ್ಳುತ್ತಿದ್ದು ಇದರಿಂದಾಗಿ ರೈತರಿಗೆ ಆದಾಯವೂ ಬರುತ್ತಿದೆ ಎಂದರು.
ಬೈಫ್ ಸಂಸ್ಥೆಯ ಹಿರಿಯ ಅಧಿಕಾರಿ ಡಾ. ಹಿರೇಮಠ್ ಅವರು ಅಶ್ವಗಂಧದ ಕುರಿತಂತೆ ಸಮಗ್ರ ತಾಂತ್ರಿಕ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಆಯ್ದ ರೈತರಿಗೆ ಸಾಂಕೇತಿಕವಾಗಿ ಅಶ್ವಗಂಧದ ಸಸ್ಯಗಳನ್ನು ವಿತರಿಸಲಾಯಿತು. ಬೈಫ್ ಸಂಸ್ಥೆಯ ಮುಖ್ಯಸ್ಥ ಎಂ.ಎನ್.ಕುಲಕರ್ಣಿ, ಲಕ್ಕಿಹಳ್ಳಿ ತರಬೇತಿ ಕೇಂದ್ರದ ಎಲ್ಲ ಸಿಬ್ಬಂದಿ ಭಾಗಿಯಾಗಿದ್ದರು. ಡಾ.ಈರಣ್ಣ ಹೂಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು.ಕೋಟ್....ಅಶ್ವಗಂಧ ಬೆಳೆಯ ಪ್ರಾಮುಖ್ಯತೆ ಹಾಗೂ ಅದರ ಉಪಯೋಗದ ಕುರಿತು ವೈಜ್ಞಾನಿಕ ಮಾಹಿತಿಯನ್ನು ನೀಡಿ ಆಗಸ್ಟ್ ತಿಂಗಳ ಒಳಗೆ ಬೀಜ ಬಿತ್ತನೆ ಮಾಡಬೇಕು. ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವದಲ್ಲಿ ಕೃಷಿ ಮಾಡಿದರೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಜೊತೆಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದರಿಂದ ಇನ್ನೂ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು.
----ಡಾ. ಮಧು ಮಲ್ಲೇಶಪ್ಪ, ಪ್ರೊಫೆಸರ್ ಗಾರ್ಡನ್ ಸಿಟಿ ಯೂನಿವರ್ಸಿಟಿ ಲೈಫ್ಸೈನ್ಸ್ ಬೆಂಗಳೂರು