ಕನ್ನಡಪ್ರಭ ವಾರ್ತೆ ಮದ್ದೂರು
ಸ್ವಚ್ಛ ಗಾಳಿ, ಸಮಾಜಕ್ಕಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನು ಹೆಚ್ಚು ಬೆಳೆಸಲು ಆದ್ಯತೆ ನೀಡಬೇಕು ಎಂದು ಅಲೆಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ ಹೇಳಿದರು.ತಾಲೂಕಿನ ವಳಗೆರೆಹಳ್ಳಿ ಸಮೀಪದ ಗುರುದತ್ತ ಅನಾಥಾಶ್ರಮದಲ್ಲಿ ಅರ್ಜುನ ಪುರಿ ಅಲೈಯನ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರು ಪ್ರಕೃತಿಗೆ ಅಧೀನರಾಗಿ ಬದುಕು ನಡೆಸುತ್ತಿದ್ದೇವೆ ಎಂದರು.
ನಮ್ಮ ಬದುಕಿಗೆ ಒಂದು ಅರ್ಥ ಬರಬೇಕಾದರೆ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ಹೊಂದಿದರೆ ಮಾತ್ರ ಆರೋಗ್ಯವಂತ ಜೀವನ ಸಾಧ್ಯವಾಗುತ್ತದೆ. ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ. ನಮ್ಮಿಂದ ಪರಿಸರಕ್ಕೆ ಏನು ಕೊಡುಗೆ ಎನ್ನುವ ಸತ್ಯವನ್ನು ಮನುಷ್ಯ ಮನವರಿಕೆ ಮಾಡಿಕೊಳ್ಳಬೇಕು ಎಂದರು.ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಪುಟ್ಟಲಿಂಗಯ್ಯ ಮಾತನಾಡಿ, ಅರಣ್ಯ ನಾಶದೊಂದಿಗೆ ಬೆಟ್ಟಗಳು ಮಾಯವಾಗಿ ಹಲವು ಕಾರಣಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಪ್ರಕೃತಿ ವಿಕೋಪಗಳಿಂದ ಅವಘಡಗಳಿಗೆ ಕಾರಣವಾಗುತ್ತಿದೆ ಎಂದರು.
ಸಂಸ್ಥೆ ಖಜಾಂಚಿ ಸುನೀತಾ, ಜೆ.ಸಂದೀಪ್ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಆಶ್ರಮದ ಅನಾಥ ಮಕ್ಕಳಿಗೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಎಸ್.ನಾಗರಾಜು, ಸದಸ್ಯ ಎಂ.ಜೆ. ಚಿಕ್ಕಣ್ಣಗೌಡ, ಕಾರ್ಯದರ್ಶಿ ಯು.ಎಸ್.ರವಿ, ಖಜಾಂಚಿ ಎಚ್.ಸುನೀತಾ, ಸಹಕಾರ್ಯದರ್ಶಿ ರಂಜಿತಾ, ನಿರ್ದೇಶಕರಾದ ಸಿದ್ದರಾಮು, ಎಚ್.ಎಸ್.ಶಿವರಾಜು, ಎಚ್.ಟಿ.ರಮೇಶ್, ಶಿವಣ್ಣ, ಮದ್ದೂರು ಅಡ್ವಕೇಟ್ ಅಲಯನ್ಸ್ ಸಂಸ್ಥೆ ಕೆ.ಚೆಲುವರಾಜು, ಮುಖಂಡ ಸಂದೀಪ್, ಗುರುದತ್ ಆಶ್ರಮದ ಮೇಲ್ವಿಚಾರಕಿ ಸುಷ್ಮಾ ಮತ್ತಿತರರು ಪಾಲ್ಗೊಂಡಿದ್ದರು.ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಮಂಡ್ಯ: ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ತಾಲೂಕಿನ ಕೊತ್ತತ್ತಿ ಫೀಡರ್ ನಲ್ಲಿ ಪರಿವರ್ತಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜೂ.20 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕೊತ್ತತ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಮಾಂತರ ಪ್ರದೇಶದ ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ.ಹುಲಿಕೆರೆ, ಬಿ.ಹುಲಿಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಅಧಿಕಾರಿಗಳು ಕೋರಿದ್ದಾರೆ.