ಇನ್ನೆರಡು ವರ್ಷ ಗೃಹಲಕ್ಷ್ಮೀ ಹಣ ನಿಲ್ಲುವುದಿಲ್ಲ: ಶಾಸಕ ಗಣೇಶ್ ಪ್ರಸಾದ್

KannadaprabhaNewsNetwork |  
Published : Jul 21, 2026, 01:45 AM IST
20ಜಿಪಿಟಿ4ಗುಂಡ್ಲುಪೇಟೆ ತಾಲೂಕಿನ ಕೂತನೂರಲ್ಲಿ ಗೃಹಲಕ್ಷ್ಮೀ ಯೋಜನೆಯ 3 ನೇ ವರ್ಷದ ಸಂಭ್ರಮಾಚರಣೆಯನ್ನು ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ನಾವು ನೀವು ಬ್ಯಾಂಕ್‌ ನಲ್ಲಿ ಪಡೆದ ಸಾಲ ಕಟ್ಟಲು ಒಂದೆರಡು ದಿನಗಳು ವ್ಯತ್ಯಯವಾಗುತ್ತದೆ. ಅದೇ ತರ ಗೃಹಲಕ್ಷ್ಮೀ ಯೋಜನೆಯಡಿ ಹಣ ಒಂದೆರಡು ತಿಂಗಳ ವಿಳಂಬವಾಗಿದೆ ಅಷ್ಟೆ ಹೊರತು ಹಣ ಬಂದೇ ಬರುತ್ತದೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ಟೀಕೆಗಳು ಬಂದರೂ ಜನ ಈ ಯೋಜನೆಯಲ್ಲಿ ಬಂದ ಹಣ ಸದುಪಯೋಗ ಪಡಿಸಿಕೊಂಡಿದ್ದಾರೆ .

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ಬರಲು ಸ್ವಲ್ಪ ವಿಳಂಬವಾಗಿರುವುದು ನಿಜ. ಆದರೆ ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮೀ ಹಣ ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪಷ್ಟಪಡಿಸಿದರು.

ತಾಲೂಕಿನ ಕೂತನೂರು ಗ್ರಾಮದಲ್ಲಿ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಯ 3ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಈಗಿನ ಸಿಎಂ ಡಿ.ಕೆ.ಶಿವಕುಮಾರ್‌ ಅವರ ದೂರದೃಷ್ಟಿಯ ಫಲವಾಗಿ ಗೃಹಲಕ್ಷ್ಮೀ ಯೋಜನೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ (2023 ರ ಜು.20) ಜಾರಿಗೆ ಬಂದಿದೆ ಎಂದರು.

ನಾವು ನೀವು ಬ್ಯಾಂಕ್‌ ನಲ್ಲಿ ಪಡೆದ ಸಾಲ ಕಟ್ಟಲು ಒಂದೆರಡು ದಿನಗಳು ವ್ಯತ್ಯಯವಾಗುತ್ತದೆ. ಅದೇ ತರ ಗೃಹಲಕ್ಷ್ಮೀ ಯೋಜನೆಯಡಿ ಹಣ ಒಂದೆರಡು ತಿಂಗಳ ವಿಳಂಬವಾಗಿದೆ ಅಷ್ಟೆ ಹೊರತು ಹಣ ಬಂದೇ ಬರುತ್ತದೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ಟೀಕೆಗಳು ಬಂದರೂ ಜನ ಈ ಯೋಜನೆಯಲ್ಲಿ ಬಂದ ಹಣ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರು.

ಗೃಹಲಕ್ಷ್ಮೀ ಯೋಜನೆ ಇಂದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇನ್ನೂ ಎರಡು ವರ್ಷ ಮುಂದುವರಿಯಲಿದೆ. 2028 ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವ ಲಕ್ಷಣಗಳಿದ್ದು, ಆಗಲೂ ಗೃಹಲಕ್ಷ್ಮೀ ಯೋಜನೆ ಮುಂದುವರಿಸಲಿದೆ ಎಂದು ಭರವಸೆ ನೀಡಿದರು.

ವೃದ್ಧಾಪ್ಯ ವೇತನ ಬರುತ್ತಿಲ್ಲ ಎಂಬ ದೂರು ಕ್ಷೇತ್ರದೆಲ್ಲೆಡೆ ಬಂದ ಕಾರಣ ಈ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಕೂಡ ಮಾತನಾಡಿದ್ದೇನೆ. ವೃದ್ಧಾಪ್ಯ ವೇತನ ಬಿಪಿಎಲ್‌ ಕಾರ್ಡ್‌ ದಾರರಿಗೆ ಬರುತ್ತಿದೆ. ಬಿಪಿಎಲ್‌ ಕಾರ್ಡ್‌ ಹೋಗಿ ಎಪಿಎಲ್‌ ಕಾರ್ಡ್‌ ಆದ ಕಾರಣ ವೃದ್ಧಾಪ್ಯ ವೇತನ ಬಂದಿಲ್ಲ. ಅದೂ ಕೂಡ ಸದ್ಯದಲ್ಲೇ ಸರಿಹೋಗಲಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ಉಮಾಪತಿ, ಸಿಡಿಪಿಒ ಎಂ.ಹೇಮಾವತಿ ಸೇರಿದಂತೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

-----------

20ಜಿಪಿಟಿ4

ಗುಂಡ್ಲುಪೇಟೆ ತಾಲೂಕಿನ ಕೂತನೂರಲ್ಲಿ ಗೃಹಲಕ್ಷ್ಮೀ ಯೋಜನೆಯ 3 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.

------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಮ್ ವಾಂಗ್ಚೂಕ್ ಸತ್ಯಾಗ್ರಹಕ್ಕೆ ಸಿಪಿಐ(ಎಂ) ಬೆಂಬಲ
ವಿದ್ಯಾರ್ಥಿಗಳ ಪಾಠಕ್ಕೆ ಕುತ್ತು ತಂದ ಎಸ್ಐಆರ್