ಜಿಎಸ್‌ಟಿ ಗ್ರಾಹಕರ ಸ್ನೇಹಿ: ಜತೀನ್‌ ಕ್ರಿಸ್ಟಾಫರ್‌

KannadaprabhaNewsNetwork |  
Published : Dec 08, 2024, 01:15 AM IST
ಚಿಕ್ಕಮಗಳೂರಿನ ಖಾಸಗೀ ಹೋಟೆಲ್‌ನಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಕುರಿತ ಕಾರ್ಯಾಗಾರವನ್ನು ಚಾರ್ಟೆಡ್‌ ಅಕೌಂಟೆಂಟ್ ಜತೀನ್ ಕ್ರಿಸ್ಟಾಫರ್ ಅವರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಎಸ್‌ಟಿ ಗ್ರಾಹಕರ ಸ್ನೇಹಿಯಾಗಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಿರುವಂತಹ ಒಂದು ತೆರಿಗೆ ನೀತಿಯಾಗಿದೆ ಎಂದು ಚಾರ್ಟೆಡ್‌ ಅಕೌಂಟೆಂಟ್ ಜತೀನ್ ಕ್ರಿಸ್ಟಾಫರ್ ಹೇಳಿದರು.

ಗೊಂದಲಗಳಿಗೆ ಅವಕಾಶ ಇಲ್ಲದ ತೆರಿಗೆ ನೀತಿ । ಸರಕು ಮತ್ತು ಸೇವಾ ತೆರಿಗೆ ಕುರಿತ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಎಸ್‌ಟಿ ಗ್ರಾಹಕರ ಸ್ನೇಹಿಯಾಗಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಿರುವಂತಹ ಒಂದು ತೆರಿಗೆ ನೀತಿಯಾಗಿದೆ ಎಂದು ಚಾರ್ಟೆಡ್‌ ಅಕೌಂಟೆಂಟ್ ಜತೀನ್ ಕ್ರಿಸ್ಟಾಫರ್ ಹೇಳಿದರು.

ನಗರದ ಖಾಸಗೀ ಹೋಟೆಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಕುರಿತು ಏರ್ಪಡಿಸಿದ್ಧ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜಿಎಸ್‌ಟಿ ವ್ಯಾಖ್ಯಾನವನ್ನು ಡಿಕೋಡ್ ಮಾಡುವುದು ಸುಲಭ. ಮೌಲ್ಯವರ್ಧನೆ ಪ್ರತಿ ಹಂತದಲ್ಲೂ ವಿಧಿಸಲಾಗುವ ಸಮಗ್ರ ತೆರಿಗೆಯಾಗಿದೆ. ದೇಶದಲ್ಲಿ ಅನೇಕ ಪರೋಕ್ಷ ತೆರಿಗೆಗಳನ್ನು ಬದಲಿಸಿದ ನಂತರ, ಭಾರತ ಸರ್ಕಾರ ಒಂದು ರಾಷ್ಟ್ರ ಒಂದು ತೆರಿಗೆ ಕಾರ್ಯಸೂಚಿ ಸಾಧಿಸಲು ಯಶಸ್ವಿಯಾಗಿದೆ ಎಂದರು.

ಆಂತರಿಕವಾಗಿ ತಯಾರಿಸಿದ ಸರಕು ಮತ್ತು ಸೇವೆಗಳ ಅಂತಿಮ ಮಾರುಕಟ್ಟೆ ಬೆಲೆ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ. ಗ್ರಾಹಕರು ತಮ್ಮ ಅಂತಿಮ ಬೆಲೆಯಲ್ಲಿ ಸೇರ್ಪಡೆಯಾಗಿ ಸರಕು ಅಥವಾ ಸೇವೆಗಳ ಖರೀದಿಗೆ ಈ ತೆರಿಗೆ ಪಾವತಿಸ ಬೇಕಾಗುತ್ತದೆ. ಮಾರಾಟಗಾರರಿಂದ ಸಂಗ್ರಹಿಸಿದ ನಂತರ ಅದನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.ಉತ್ತಮ ಸೇವಾ ತೆರಿಗೆಯನ್ನು ಸಮಗ್ರ ಪರೋಕ್ಷ ತೆರಿಗೆ ರಚನೆಯಾಗಿ ಪರಿಚಯಿಸಲಾಯಿತು. ಈ ಪರಿಚಯದೊಂದಿಗೆ, ಸರ್ಕಾರ ಒಂದೇ ಸೂರಿನಡಿ ವಿಧಿಸಲಾದ ಎಲ್ಲಾ ಪರೋಕ್ಷ ತೆರಿಗೆಗಳನ್ನು ಏಕೀಕರಿಸುವ ಗುರಿ ಹೊಂದಿದೆ ಎಂದರು.ಸರಕುಗಳ ಆಮದಿನ ಮೇಲೆ ವಿಧಿಸಲಾಗುವ ಕಸ್ಟಮ್ಸ್ ಸುಂಕ ಹೊರತುಪಡಿಸಿ, ಸರಕು ಮತ್ತು ಸೇವಾ ತೆರಿಗೆಯು ಬಹು ಪರೋಕ್ಷ ತೆರಿಗೆಗಳನ್ನು ಬದಲಾಯಿಸಿತು. ಈ ಪರಿಚಯ ಅದರ ಹಿಂದಿನ ಪರೋಕ್ಷ ತೆರಿಗೆ ರಚನೆ ಅನುಷ್ಟಾನ ಮತ್ತು ಸಂಗ್ರಹ ಪ್ರಕ್ರಿಯೆಯಲ್ಲಿನ ಅಸಮರ್ಥತೆ ಮಿತಿಗಳನ್ನು ನಿವಾರಿಸಲು ಸಹಾಯ ಮಾಡಿದೆ ಎಂದು ಹೇಳಿದರು.ಜಿಎಸ್‌ಟಿ ಜಾರಿಗೂ ಮುನ್ನ ತೆರಿಗೆ ವಂಚನೆ ಪ್ರಮಾಣ ಹೆಚ್ಚಾಗಿತ್ತು. ವಂಚನೆಯನ್ನು ತಡೆಯಲು ಮತ್ತು ಕೇಂದ್ರೀಕೃತ ತೆರಿಗೆ ಕಣ್ಗಾವಲು ವ್ಯವಸ್ಥೆಯನ್ನು ರಚಿಸಲು, ಭಾರತದಲ್ಲಿ ಜಿಎಸ್ಟಿಯನ್ನು ಪರಿಚಯಿಸಲಾಯಿತು. ತೆರಿಗೆ ಸುಸ್ತಿದಾರರ ಸಂಖ್ಯೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿ ಕೊಡುಗೆ ನೀಡಿದೆ ಎಂದರು.ಗ್ರಾಹಕ ವಸ್ತುವೊಂದನ್ನು ಕೊಂಡಾಗ ಏನು ಗಮನಿಸಬೇಕು. ಅದರಲ್ಲಿ ಮೋಸ ಹೋದರೆ ಏನು ಮಾಡಬೇಕು. ಇದರಲ್ಲಿ ಗ್ರಾಹಕರ ಪಾತ್ರವೇನು, ವ್ಯಾಪಾರಿಗಳ ಪಾತ್ರವೇನು, ಒಟ್ಟಾರೆ ದೇಶದ ಬೆಳವಣಿಗೆಯಲ್ಲಿ ಜಿಎಸ್‌ಟಿ ಹೇಗೆ ಪರಿಣಾಮಕಾರಿ ಎಂಬ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಾಗಾರ ಎಲ್ಲರಿಗೂ ಸದುಪಯೋಗವಾಗಲಿ ಎಂದರು.ಕಾರ್ಯಾಗಾರದಲ್ಲಿ ಚಾರ್ಟೆಡ್‌ಗಳಾದ ಕಿರಣ್ ಸೋಮಯ್ಯ, ಶ್ಯಾಮಲಾ ಶ್ರೇಯಸ್, ಪ್ರಜ್ಞಾ ಸವೂರ್, ಕೃಷ್ಣರಾಜು, ರಾಜು ಹಾಗೂ ಲೆಕ್ಕಪರಿಶೋಧಕರು, ಲೆಕ್ಕಿಗರು ಉಪಸ್ಥಿತರಿದ್ದರು.7 ಕೆಸಿಕೆಎಂ 2ಚಿಕ್ಕಮಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಕುರಿತ ಕಾರ್ಯಾಗಾರವನ್ನು ಚಾರ್ಟೆಡ್‌ ಅಕೌಂಟೆಂಟ್ ಜತೀನ್ ಕ್ರಿಸ್ಟಾಫರ್ ಅವರು ಉದ್ಘಾಟಿಸಿ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ