ನರಗುಂದ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ಲ ತಿಳಿಸಿದರು.
ತಾಲೂಕಿನಲ್ಲಿ ಅನ್ನಭಾಗ್ಯ, ಶಕ್ತಿ ಯೋಜನೆಗಳಲ್ಲಿ ಶೇ.100ರಷ್ಟು ಹಾಗೂ ಗೃಹಜ್ಯೋತಿ, ಗೃಹಲಕ್ಷ್ಮಿ, ಯೋಜನೆಗಳಲ್ಲಿ ಶೇ. 98ಕ್ಕಿಂತ ಅಧಿಕ ಹಾಗೂ ಯುವನಿಧಿಯಡಿ ಶೇ.75ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕಮಲಾ ಹುಲಕೋಟಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ₹2000ರಂತೆ 23465 ಯಜಮಾನಿಯರಿಗೆ ಜೂನ್ ಅಂತ್ಯದವರೆಗೆ ಡಿಬಿಟಿಯಡಿ ಹಣ ಪಾವತಿಸುವ ಮೂಲಕ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನುಳಿದಂತೆ ಮರಣ ಹೊಂದಿದ ಹಾಗೂ ಜಿಎಸಟಿ ವ್ಯಾಪ್ತಿಗೊಳಟ್ಟ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ನೀಡಲು ನಿರ್ಬಂಧವಿದೆ. ಈ ಯೋಜನೆಗೆ ನಿರಂತರವಾಗಿ ಅರ್ಜಿಗಳನ್ನು ತಂತ್ರಾಂಶ ಮೂಲಕ ಹಾಕಬಹುದೆಂದು ತಿಳಿಸಿದರು.ಆಹಾರ ಇಲಾಖೆ ಅಧಿಕಾರಿ ಪವಾರ ಮಾತನಾಡಿ, ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿನ ಒಟ್ಟು 23119 ಅರ್ಹ ಪಡಿತರ ಚೀಟಿಗಳಡಿ 78712 ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ವಿತರಿಸಿದೆ ಎಂದರು.
ಹೆಸ್ಕಾಂ ಅಧಿಕಾರಿ ಮಾತನಾಡಿ ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿರುವ 25321 ವಿದ್ಯುತ್ ಸ್ಥಾವರಗಳ ಪೈಕಿ 25072 ವಿದ್ಯುತ್ ಸ್ಥಾವರಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆ ಮೂಲಕ ಶೇ. 99ರಷ್ಟು ಪ್ರಗತಿ ಸಾಧಿಸಿದೆ. ಸುರಕೋಡ ಗ್ರಾಮದಲ್ಲಿ 14 ಜನರು ಈ ಸೌಲಭ್ಯವನ್ನು ಹೊಂದುವುದು ಬಾಕಿಯಿದೆ. ಅವರನ್ನು ಸಹ ಈ ಯೋಜನೆ ವ್ಯಾಪ್ತಿಗೊಳಪಡಿಸಲಾಗಿವುದೆಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಗ್ಯಾರಂಟಿ ಸಮಿತಿ ಸದಸ್ಯರಾದ ಎಸ್.ಕೆ. ಇನಾಮದಾರ, ದ್ಯಾಮಣ್ಣ ಕಾಡಪ್ಪನವರ, ಟಿ.ಬಿ. ಶಿರಿಯಪ್ಪಗೌಡ್ರ, ವೀರೇಶ ಚುಳಕಿ, ವಿನಾಯಕ ಹಡಗಲಿ, ಉಮಾ ದ್ಯಾವನೂರ, ಬಸನಗೌಡ ಮಲ್ಲನಗೌಡ್ರ, ದೇವಪ್ಪ ನಾಗನೂರ, ವೀರಯ್ಯ ಹುಚ್ಚಪ್ಪವರ, ಹನುಮಂತ ರಾಮಣ್ಣವರ, ಮೌಲಾಸಾಬ ಅರಬಜಮಾದಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೃತಿ ಸಂಗಳ, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.