ಕುಶಾಲನಗರ: ಪಟ್ಟಣದ ಸ್ವಚ್ಛತೆ ಮತ್ತು ಕಾವೇರಿಯ ಸಂರಕ್ಷಣೆಗಾಗಿ ಕುಶಾಲನಗರ ಪುರಸಭೆ ಮೂಲಕ ವಿಶೇಷ ಕಾವಲುಗಾರರ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ. ಗಿರೀಶ್ ತಿಳಿಸಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ನೇತೃತ್ವದಲ್ಲಿ ಕುಶಾಲನಗರ ಸಂಘ ಸಂಸ್ಥೆಗಳ ಪ್ರಮುಖರು ಸ್ವಚ್ಛ ಕುಶಾಲನಗರ ಸ್ವಚ್ಛ ಕಾವೇರಿ ಬಗ್ಗೆ ಚರ್ಚಿಸಿ ಮನವಿ ಪತ್ರ ಸಲ್ಲಿಸಿದ ಸಂದರ್ಭ ಅವರು ಮಾತನಾಡಿದರು.
ಕುಶಾಲನಗರದಲ್ಲಿ ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಪಟ್ಟಣದ ಒಳಚರಂಡಿ ಕಾಮಗಾರಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುಖ್ಯ ಅಧಿಕಾರಿ, ಈ ಬಗ್ಗೆ ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆದರು. ಜೂನ್ ಅಂತ್ಯದೊಳಗೆ ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಒಳಚರಂಡಿ ಯೋಜನೆಯ ಅಧಿಕಾರಿ ನೀಡಿರುವುದಾಗಿ ತಿಳಿಸಿದರು. ಜೂನ್ ಅಂತ್ಯದ ಒಳಗಾಗಿ ಮನವಿಗೆ ಸ್ಪಂದಿಸದೆ ಇದ್ದರೆ ಕುಶಾಲನಗರ ಪಟ್ಟಣದ ಒಳಚರಂಡಿ ಕಾಮಗಾರಿಯ ವಿಳಂಬದ ಬಗ್ಗೆ ಲೋಕಾಯುಕ್ತ ಮತ್ತು ರಾಜ್ಯ ಹೈಕೋರ್ಟ್ನ ನ್ಯಾಯಾಲಯದ ಮೊರೆ ಹೋಗುವುದಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಮುಖ್ಯ ಅಧಿಕಾರಿಗಳಿಗೆ ಎಚ್ಚರಿಸಿ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಮಂಡೆಪಂಡ ಬೋಸ್ ಮೊಣ್ಣಪ್ಪ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಡಿ.ಆರ್. ಶಿವಶಂಕರ್, ಬಿ.ಸಿ. ಶಿವರಾಜ್ ವಾಸವಿ ಯುವಜನ ಸಂಘದ ಉಪಾಧ್ಯಕ್ಷರಾದ ವೈಶಾಕ್, ಗೌಡ ಸಮಾಜ ಉಪಾಧ್ಯಕ್ಷರಾದ ಕೊಡಗನ ಹರ್ಷ, ಛೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಅಮೃತರಾಜ್, ಮಾಜಿ ಸೈನಿಕರಾದ ಆಮೆ ಜನಾರ್ದನ್, ಕರುಂಬಯ್ಯ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಪುರಸಭೆ ಆರೋಗ್ಯ ಅಧಿಕಾರಿ ಉದಯ ಕುಮಾರ್, ಕಂದಾಯ ಅಧಿಕಾರಿ ರಾಮು ಇದ್ದರು.