ಹೇಮಾವತಿ ಕೆನಾಲ್ ಕಾಮಗಾರಿಗೆ ಆಕ್ಷೇಪ: ಪ್ರತಿಭಟನೆ
ಕೆಎಂಎಫ್ ಚುನಾವಣೆಗೆ ಗುಬ್ಬಿ ಶಾಸಕರು ಅವರ ಪತ್ನಿಯನ್ನು ನಿಲ್ಲಿಸಿ ಚುನಾವಣೆ ನಡೆಸಲು ಹೇಮಾವತಿ ಲಿಂಕ್ ಕೆನಾಲ್ ಗುತ್ತಿಗೆದಾರರಿಂದ ಕಮಿಷನ್ ಪಡೆದು ತಾಲೂಕಿನ ರೈತರ ಹಿತವನ್ನು ಮರೆತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಸಲು ಸುಮಾರು 50 ಲಾರಿಯಲ್ಲಿ 12 ಅಡಿ ಎತ್ತರದ ಬೃಹತ್ ಪೈಪುಗಳನ್ನು ಇಳಿಸಲು ಮುಂದಾಗಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.ರಾಮನಗರ, ಮಾಗಡಿ ಭಾಗಗಳಿಗೆ ಯಾವುದೇ ಕಾರಣಕ್ಕೂ ಇಲ್ಲಿಂದ ನೀರು ಹರಿಸಲು ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಗೆ ಮರಣ ಶಾಸನ ಬರೆಯಲು ಸಿದ್ಧವಾಗಿದ್ದರೂ ಸಹ ಕೆಲವು ಕಾಂಗ್ರೆಸ್ ಶಾಸಕರು ಕಾಮಗಾರಿ ತಡೆಯಲು ಮುಂದಾಗಿಲ್ಲ. ಈ ಬೃಹತ್ ಪೈಪುಗಳ ಮೂಲಕ ನೀರು ಏನಾದರೂ ಹೋಗಲು ಆರಂಭವಾದರೆ ನಿಟ್ಟೂರಿನಿಂದ ಮುಂದಿನ ಭಾಗಗಳಿಗೆ ನೀರೇ ಹೋಗುವುದಿಲ್ಲ. ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ, ತುಮಕೂರು ನಗರ ಸೇರಿದಂತೆ ಇಡೀ ಜಿಲ್ಲೆಗೆ ನೀರಿನ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ತಿಳಿದಿದ್ದರೂ ಈ ಕಾಮಗಾರಿಯನ್ನು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಆರಂಭವಾಗುತ್ತಿದೆ ಎಂದು ಹೇಳಿದರು.
ಹಲವು ರೈತ ಹೋರಾಟಗಾರರು, ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾದರು.