ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಗೂಡೆಹೊಸಹಳ್ಳಿ ಪಂಪ್ ಹೌಸ್ಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿಯೆ ತುರ್ತಾಗಿ ಕಂದಾಯ ಇಲಾಖೆಯ ಸಮಸ್ಯೆ ಬಗೆಹರಿಸುವಂತೆ ನಿರ್ದೇಶಿಸಿದರು.
ಶಾಸಕರ ಭೇಟಿಯ ವೇಳೆ ಸ್ಥಳಕ್ಕೆ ಆಗಮಿಸಿದ ರೈತರು ನೀರಾವರಿ ಇಲಾಖೆಯ ಕಿಕ್ಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಧಾ ಜೈನ್ ಅವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಾರದೆ ಪರದಾಡಿದ ಸುಧಾ ಅವರನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡರು.ಏತ ನೀರಾವರಿಯ ಯೋಜನಾ ವೆಚ್ಚವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ ಶಾಸಕ ಮಂಜು, ೬ ವರ್ಷಗಳು ಕಳೆದರೂ ಈ ಯೋಜನೆ ಜನರಿಗೆ ತಲುಪುತ್ತಿಲ್ಲವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಯೋಜನಾ ವ್ಯಾಪ್ತಿಯ ೧೫೬ ರೈತರಿಗೆ ಈಗಾಗಲೇ ೧.೮೦ ಕೋಟಿ ರು.ಪರಿಹಾರ ವಿತರಿಸಲಾಗಿದೆ. ನಾಗಮಂಗಲ ಕ್ಷೇತ್ರದ ಶಾಸಕರೇ ಪ್ರಸ್ತುತ ಜಲಸಂಪನ್ಮೂಲ ಸಚಿವರಾಗಿದ್ದು ನಾನು ಅಘಲಯ ಪಂಪ್ಹೌಸ್ಗೆ ನೀರನ್ನು ತಲುಪುವಂತೆ ಮಾಡಿ. ನಂತರ ಉಳಿಕೆ ಕೆಲಸ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಖುದ್ದು ಸಚಿವರೇ ಪಾಂಡವಪುರ ಉಪ ವಿಭಾಗಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಂದಾಯ ಇಲಾಖೆಯ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಇನ್ನೊಂದು ವಾರದ ಒಳಗಾಗಿ ಸಮಸ್ಯೆ ಪರಿಹರಿಸಿಕೊಡುವುದಾಗಿ ಉಪ ವಿಭಾಗಾಧಿಕಾರಿಗಳು ಭರವಸೆ ನೀಡಿದ್ದು ಸದ್ಯದಲ್ಲಿಯೆ ಕೆರೆ ಕಟ್ಟೆಗಳನ್ನು ತುಂಬಿಸಿಕೊಡುವುದಾಗಿ ಶಾಸಕ ಮಂಜು ಜನರಿಗೆ ತಿಳಿಸಿದರು.
ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್.ಜೆ.ಸುಧಾ, ಸಹಾಯಕ ಅಭಿಯಂತರ ರಾಕೇಶ್, ರಾಜಸ್ವ ನಿರೀಕ್ಷಕ ನರೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ನಿರ್ದೇಶಕರಾದ ಮಧು ಕೆ.ಬಿ., ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹುಲ್ಲೇಗೌಡ, ಮುಖಂಡರಾದ ಕಿಕ್ಕೇರಿ ಶೇಖರ್, ಹುಬ್ಬನಹಳ್ಳಿ ಬಲರಾಮೇಗೌಡ, ಕಡಹೆಮ್ಮಿಗೆ ವೆಂಕಟೇಶ್, ಆಪ್ತ ಸಹಾಯಕರದ ಪ್ರತಾಪ್, ಧೃವ ಸೇರಿದಂತೆ ಹಲವರಿದ್ದರು.