ಗುಂಡಿಮಯ ರಸ್ತೆ ರಾಜ್ಯ ಸರ್ಕಾರದ ಗ್ಯಾರಂಟಿಯ ಒಂದು ಭಾಗ: ಕಾಗೇರಿ ವಾಗ್ದಾಳಿ

KannadaprabhaNewsNetwork |  
Published : Nov 12, 2025, 02:45 AM IST
ಮುಂಡಗೋಡ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಬಳಿಕ ಮಾತನಾಡಿದರು | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ ಬದಲಾಗಿ ಇಡೀ ರಾಜ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ.

ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಂಸದ

ಕನ್ನಡಪ್ರಭ ವಾರ್ತೆ ಮುಂಡಗೋಡ

ಗುಂಡಿಮಯ ರಸ್ತೆಗಳು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಒಂದು ಭಾಗವಾಗಿವೆ. ಯಾವ ರಸ್ತೆಯನ್ನೂ ರಿಪೇರಿ ಮಾಡಲು ಕೂಡ ಈ ಸರ್ಕಾರದ ಬಳಿ ಹಣವಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಮಂಗಳವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ ಬದಲಾಗಿ ಇಡೀ ರಾಜ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಬೆಂಗಳೂರಿನಿಂದ ಕಾರವಾರದವರೆಗೆ ಯಾವ ರಸ್ತೆಗಳು ಕೂಡ ಸರಿಯಿಲ್ಲ. ಮಳೆ ಜಾಸ್ತಿಯಾಗಿರುವುದರಿಂದ ಬೆಳೆಗಳು ಹಾನಿಯಾಗಿವೆ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಸಂಸದನಾಗಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಒಳಜಗಳ ಮತ್ತು ಕಚ್ಚಾಟದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದ್ದು, ರಾಜ್ಯದಲ್ಲಿ ಆಡಳಿತವೇ ಇಲ್ಲದ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್‌ನವರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ. ಅಭಿವೃದ್ದಿಗೆ ಇವರ ಬಳಿ ಹಣವಿಲ್ಲ. ಜೊತೆಗೆ ಅಲ್ಪಸಂಖ್ಯಾತರ ಓಲೈಕೆ ಮಿತಿ ಮೀರಿದೆ. ಜೈಲುಗಳು ಎನ್ನುವುದು ಐಷಾರಾಮಿ ರೆಸಾರ್ಟ್‌ ಆಗಿ ಪರಿವರ್ತನೆಗೊಂಡಿವೆ. ದೇಶದ್ರೋಹಿ ಚಟುವಟಿಕೆ ನಡೆಸುವರಿಗೆ ಮೊಬೈಲ್‌ನಿಂದ ಹಿಡಿದು ಎಲ್ಲ ಸವಲತ್ತು ಒದಗಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯಲ್ಲಿ ನಡೆದಂತಹ ಸ್ಫೋಟ ಪ್ರಕರಣ ದೇಶದ ಜನತೆಯನ್ನು ಆಘಾತಗೊಳಿಸಿದೆ. ಕಳೆದ ೧೧ ವರ್ಷದ ನರೇಂದ್ರ ಮೋದಿ ಅವರ ಡಳಿತದಲ್ಲಿ ಇಂತಹ ಯಾವುದೇ ಅವಗಡ ನಡೆದಿರಲಿಲ್ಲ. ಇದೀಗ ನಡೆದಿರುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಾಗೇರಿ ಹೇಳಿದರು.ಒಂದೇ ಮಾತರಂ ಹಾಗೂ ಜನಗಣ ಮನ ಎರಡೂ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿವೆ. ಎರಡನ್ನೂ ಕೂಡ ನಾವು ಸರಿಸಮವಾಗಿ ಕಾಣುತ್ತೇವೆ. ಕಾಂಗ್ರೆಸ್‌ ಮಾತ್ರ ಹಿಂದಿನಿಂದಲೂ ಒಂದೇ ಮಾತರಂ ಗೀತೆಯನ್ನು ವಿರೋಧಿಸುತ್ತ ಬರುತ್ತಿದೆ. ಈ ಬಗ್ಗೆ ಚರ್ಚೆಯಾಗಬೇಕಿದೆ. ಆರ್.ಎಸ್.ಎಸ್ ಬಗ್ಗೆ ತಿಳುವಳಿಕೆ ಇಲ್ಲದ ರಾಜಕೀಯ ಸ್ವಾರ್ಥ ಸಾಧಿಸಲಿಚ್ಚಿಸುವರು ಆರಂಭದಿಂದಲೂ ಅದರ ಬಗ್ಗೆ ಅಪಪ್ರಚಾರ ಮಾಡುತ್ತಾ ಬರುತ್ತಿದ್ದಾರೆ ಎಂದರು.

ಹೆಬ್ಬಾರ ಹೇಳಿಕೆ ವಿರುದ್ಧ ವ್ಯಂಗ್ಯ:

ಶಿವರಾಮ ಹೆಬ್ಬಾರ ಏನು ಎಂಬುದು ಜಿಲ್ಲೆ ಹಾಗೂ ರಾಜ್ಯದ ಜನತೆಗೆ ಗೊತ್ತಿದೆ. ಹೆಬ್ಬಾರ ಹೇಳಿಕೆ ನೀಡುತ್ತಿರುವುದಕ್ಕೂ ನಡವಳಿಕೆಗೂ ಯಾವುದೇ ತಾಳ-ತಂತಿಯಿಲ್ಲ. ಏನಾದರೂ ಹೇಳುವುದಕ್ಕೆ ನೈತಿಕತೆ ಬಲ ಎಂಬುದು ಬೇಕಲ್ಲವಾ? ಅದೇನೊ ಅಂತಾರಲ್ಲ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಹಾಗಾಯಿತು ಎಂದು ಕಾಗೇರಿ ವ್ಯಂಗ್ಯವಾಡಿದರು. ಈ ಸಂದರ್ಭ ತಾಲೂಕಾ ಬಿಜೆಪಿ ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ, ಪಪಂ ಸದಸ್ಯ ಶ್ರೀಕಾಂತ ಸಾನು, ಅಶೋಕ ಚಲವಾದಿ, ಮಂಜುನಾಥ ಹರ‍್ಮಲಕರ, ಜಿಪಂ ಮಾಜಿ ಸದಸ್ಯ ರಾಘು ಭಟ್ಟ, ತುಕಾರಾಮ ಇಂಗಳೆ, ಗುರುರಾಜ ಕಾಮತ, ರಾಜು ಸೋಮಣಕರ, ಬಸವರಾಜ ಠಣಕೆದಾರ, ಭರತರಾಜ ಹದಳಗಿ, ವಿಠ್ಠಲ ಬಾಳಂಬೀಡ, ಪಿ.ಜಿ. ತಂಗಚ್ಚನ್ ಗೌರೀಶ ಮುಂತಾದವರಿದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ