ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಟಿಪ್ಪರ್‌ ಸ್ಪೀಡ್‌ ಹಾವಳಿಗೆ ಗುಂಡ್ಲುಪೇಟೆ ಪೊಲೀಸರಿಂದ ಬ್ರೇಕ್‌

KannadaprabhaNewsNetwork | Published : Sep 22, 2024 1:50 AM

ಕಳೆದ ಮೂರು ದಿನಗಳ ಹಿಂದೆ ಟಿಪ್ಪರ್‌ ಹರಿದು ಮೂವರು ಬಲಿಯಾದ ಬಳಿಕ ಎಚ್ಚೆತ್ತ ಗುಂಡ್ಲುಪೇಟೆ ಪೊಲೀಸರು ಶುಕ್ರವಾರ ಟಿಪ್ಪರ್‌ಗಳ ತಪಾಸಣೆಗೆ ಮುಂದಾಗಿ ದಂಡ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಳೆದ ಮೂರು ದಿನಗಳ ಹಿಂದೆ ಟಿಪ್ಪರ್‌ ಹರಿದು ಮೂವರು ಬಲಿಯಾದ ಬಳಿಕ ಎಚ್ಚೆತ್ತ ಗುಂಡ್ಲುಪೇಟೆ ಪೊಲೀಸರು ಶುಕ್ರವಾರ ಟಿಪ್ಪರ್‌ಗಳ ತಪಾಸಣೆಗೆ ಮುಂದಾಗಿ ದಂಡ ಹಾಕುತ್ತಿದ್ದಾರೆ.

ಕನ್ನಡಪ್ರಭ ವರದಿ ಹಾಗೂ ಕನ್ನಡಪರ ಸಂಘಟನೆಗಳು, ರೈತಸಂಘದ ಆಗ್ರಹದ ಜೊತೆಗೆ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್‌) ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌, ಆರ್‌ಟಿಒ ಇಲಾಖೆ ವಿರುದ್ಧ ಸಮರ ಸಾರಿದ್ದರು. ಇದರ ಬೆನ್ನಲ್ಲೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಟಿಪ್ಪರ್‌ ಹಾವಳಿ ಹತೋಟಿಗೆ ಚಿಂತನೆ ಎಂದು ಪ್ರತಿಭಟನಾಕಾರರು, ಕನ್ನಡಪ್ರಭ ವರದಿಗೆ ಸ್ಪಂದಿಸಿ ಪೊಲೀಸರು ಮೈ ಚಳಿ ಬಿಟ್ಟು ಬೀದಿಗೀಳಿದು ತಪಾಸಣೆ ಶುರು ಮಾಡಿದ್ದಾರೆ.

ಟಿಪ್ಪರ್‌ಗಳ ಓವರ್‌ ಸ್ಪೀಡ್, ಓವರ್ ಲೋಡ್‌, ಟಿಪ್ಪರ್‌ಗಳ ಮೇಲಿನ ಹೊದಿಕೆ, ಪರ್ಮಿಟ್‌ ತಪಾಸಣೆ ಸಮಯದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಆರ್‌.ಬಿ ದಂಡ ಹಾಕಿದ್ದಾರೆ. ತಾಲೂಕಿನ ಗುಂಡ್ಲುಪೇಟೆ ಪೊಲೀಸರು ತಪಾಸಣೆ ನಡೆಸಿದರೆ ಸಾಲದು, ಬೇಗೂರು, ತೆರಕಣಾಂಬಿ ಪೊಲೀಸರು ಕೂಡ ಠಾಣೆ ಮುಂದೆ ತೆರಳುವ ಟಿಪ್ಪರ್‌ ಗಳ ತಪಾಸಣೆ ನಡೆಸಿ ದಂಡ ಹಾಕಲಿ ಎಂಬುದು ಕನ್ನಡಪ್ರಭದ ಕಳಕಳಿ.

ಕೈ ಚೆಲ್ಲಬೇಡಿ: ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಪೊಲೀಸ್‌ ಠಾಣೆಗಳ ಸರಹದ್ದಿನಲ್ಲಿ ತೆರಳುವ ಟಿಪ್ಪರ್‌ಗಳ ಓವರ್‌ ಸ್ಪೀಡ್‌, ಓವರ್‌ ಲೋಡ್‌, ಪರ್ಮಿಟ್‌, ಮೆಲಿನಹೊದಿಕೆ ಇಲ್ಲದೆ ಸಂಚರಿಸುವ ಟಿಪ್ಪರ್‌ ಗಳ ಮೇಲೆ ಮೊದಲಿಗೆ ದಂಡ ಹಾಗೂ ಅದಕ್ಕೂ ಬಗ್ಗದಿದ್ದರೆ ಕೇಸು ಹಾಕಲಿ ಎಂಬುದು ಸಾರ್ಜನಿಕರ ಆಗ್ರಹವಾಗಿದೆ. ಟಿಪ್ಪರ್‌ಗಳ ಚಾಲಕರು ಸಮವಸ್ತ್ರ ಧರಿಸುತ್ತಿಲ್ಲ. ಕುಡಿದು ಟಿಪ್ಪರ್‌ ಓಡಿಸುವುದು ಹಾಗೂ ಮೊಬೈಲ್‌ ನಲ್ಲಿ ಮಾತನಾಡಿಕೊಂಡು ಟಿಪ್ಪರ್‌ ಓಡಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೂ ಪೊಲೀಸರು ಕಡಿವಾಣ ಹಾಕಬೇಕಿದೆ.

ಕೇವಲ ಟಿಪ್ಪರ್‌ಗಳ ತಪಾಸಣೆ ನಡೆಸಿದರೆ ಸಾಲದು, ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ಆಟೋಗಳ ದಾಖಲೆಗಳ ತಪಾಸಣೆ ಆಗಬೇಕು, ಆಟೋಗಳ ಚಾಲಕರು ಕೂಡ ಸಮವಸ್ತ್ರ ಧರಿಸುತ್ತಿಲ್ಲ. ವಿಮೆ ಇರಲ್ಲ, ಎಫ್‌ಸಿ ಇರದ, ಗೂಡ್ಸ್‌, ಪ್ಯಾಸೆಂಜರ್‌ ಆಟೋಗಳಲ್ಲಿ ಮೀತಿ ಮೀರಿದ ಪ್ರಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಹೋಗುವ ಬಗ್ಗೆಯೂ ಪೊಲೀಸರು ತಪಾಸಣೆ ನಡೆಸಿದರೆ ಅಪಘಾತ ತಡೆಗಟ್ಟಲು ಸಾಧ್ಯ ಎಂಬುದು ಜನರ ಮಾತಾಗಿದೆ.