ನರೇಗಲ್ಲ: ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಮಳೆ ಎಂದರೆ ಕೇವಲ ಹವಾಮಾನವಲ್ಲ, ಅದು ಬದುಕಿನ ಉಸಿರು, ರೈತನಿಗೆ ಬದುಕು. ಆ ಬದುಕಿನ ಭರವಸೆ ಕೈತಪ್ಪುವ ಭಯ ಎದುರಾದಾಗ ಗ್ರಾಮೀಣರು ಇಂದಿಗೂ ತಮ್ಮ ಪಾರಂಪರಿಕ ಆಚರಣೆಗಳ ಮೊರೆ ಹೋಗುತ್ತಾರೆ. ಅಂತಹ ಅಪರೂಪದ ಜನಪದ ಸಂಪ್ರದಾಯವೊಂದಕ್ಕೆ ಸಮೀಪದ ಅಬ್ಬಿಗೇರಿ ಗ್ರಾಮ ಸಾಕ್ಷಿಯಾಯಿತು.ಗುರ್ಜಿ... ಗುರ್ಜಿ... ಎಲ್ಲಾಡಿ ಬಂದೆ... ಹಳ್ಳ- ಕೊಳ್ಳ ತಿರುಗಾಡಿ ಬಂದೆ... ಕಾರ ಮಳೆಯೇ, ಕಪ್ಪತ್ತ ಮಳೆಯೇ... ಬಣ್ಣ ಕೊಡತಿನಿ ಬಾ ಮಳೆಯೇ... ಸುಣ್ಣ ಕೊಡತಿನಿ ಸುರಿಮಳೆಯೇ... ಎಂಬ ಜನಪದ ಗೀತೆಯ ನಾದಗಳು ಗ್ರಾಮದ ಗೌಡ್ರ ಓಣಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ಹೊಲಗಳಲ್ಲಿ ಮೊಳಕೆಯೊಡೆದ ಬೀಜಗಳು ನೀರಿಗಾಗಿ ಕಾಯುತ್ತಿವೆ. ಮಣ್ಣು ಒಣಗುತ್ತಿದೆ. ದಿನದಿಂದ ದಿನಕ್ಕೆ ರೈತರ ಚಿಂತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ತಲೆಮಾರುಗಳಿಂದ ಆಚರಿಸಿಕೊಂಡು ಬಂದಿರುವ ಗುರ್ಜಿ ಪೂಜೆಯನ್ನು ನೆರವೇರಿಸಿದರು.
ವರುಣನ ಕೃಪೆಗಾಗಿ ದೈವದ ಮೊರೆ
ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಳೆಗಾಗಿ ಮಾಡುವ ಸಂಪ್ರದಾಯಗಳಲ್ಲೊಂದಾದ ಗೊಂಬೆ ಜೋಳ ತೈ ಚಿಕ್ಕ ಮಕ್ಕಳು ಒಂದು ಮರದಲ್ಲಿ ಜೋಳದೊಂದಿಗೆ ಗೊಂಬೆ ಇಟ್ಟು, ಗ್ರಾಮದ ಪ್ರತಿ ಮನೆಗೆ ತೆರಳಿ ಜೋಳ ಹಾಕಿಸಿಕೊಂಡು ಕೂಡಿಡುತ್ತಾರೆ. ಗ್ರಾಮದ ಮಹಿಳೆಯರು ಸೇರಿ ಸಂತೆ ಮಾಡಿ, ನುಚ್ಚು ಹಾಕಿಸಿ ಸಂಕಟಿ ಸಾರು ಮಾಡಿ ಹಳ್ಳಕ್ಕೆ ಹೋಗಿ ಮಳೆರಾಯನ ಕೃಪೆಗೆ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಮಹಿಳೆಯರೆಲ್ಲರೂ ಪ್ರಸಾದ ಮಾಡಿ ತಂದು ಮನೆಯವರೊಂದಿಗೆ ಸೇವನೆ ಮಾಡುತ್ತಾರೆ.ಈ ಪೂಜೆಯನ್ನು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಮಾಡುವ ಪ್ರತೀತಿ ಇದೆ. ಹೀಗೆ ಮಾಡಿದರೆ ಮಳೆರಾಯ ಆಗುತ್ತಾನೆ ಎಂಬುದು ಗ್ರಾಮೀಣ ಭಾಗದ ರೈತ ಮಹಿಳೆಯರ ನಂಬಿಕೆ. ಅಲ್ಲದೆ ಈ ನಂಬಿಕೆಗೆ ಮಳೆ ಆಗಿದ್ದು ಇಲ್ಲಿ ಸಾಕಷ್ಟು ಬಾರಿ ಕಾಣಬಹುದಾಗಿದೆ.ಇದು ಒಂದು ಗ್ರಾಮದ ರೈತರ ಗೋಳಲ್ಲ ಹೊಳೆಆಲೂರ ಹೋಬಳಿ ಸೇರಿದಂತೆ ಬೆನಹಾಳ, ಹುನಗುಂಡಿ, ಅಸೂಟಿ, ಗಾಡಗೋಳಿ, ಹೊಳೆಮಣ್ಣೂರ, ಸೋಮನಕಟ್ಟಿ, ಮೇಲ್ಮಠ, ಮೆಣಸಗಿ, ಗುಳಗಂಡಿ, ಅಮರಗೋಳ, ಹೊಳೆಹಡಗಲಿ, ಬಿ.ಎಸ್. ಬೇಲೇರಿ, ಬಸರಕೋಡ, ಮಾಳವಾಡ ಗ್ರಾಮಗಳ ಪ್ರದೇಶಗಳಲ್ಲಿ ಮಳೆ ಆಗದೆ ರೈತರು ದೇವರ ಮೊರೆ ಹೋಗಿದ್ದಾರೆ.