ಎರೆಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ

KannadaprabhaNewsNetwork |  
Published : Jul 03, 2025, 11:50 PM ISTUpdated : Jul 03, 2025, 11:51 PM IST
3ಎಚ್‌ಯುಬಿ23ಎನಿವೃತ್ತ ಶಿಕ್ಷಕರಾದ ಎಚ್.ಜಿ. ದುರಗಣ್ಣವರ ರಚಿಸಿದ ಹೋರಾಟಮಯ ಜೀವನ ಕೃತಿಯನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ರೊಟ್ಟಿಗವಾಡ ಗ್ರಾಮದ ಜಿಇಸಿ ಜಿ.ಕೆ. ಹಿರೇಗೌಡರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹಪಾಠಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 30 ವರ್ಷಗಳ ನಂತರ ಶಾಲಾ ಆವರಣದಲ್ಲಿ ಭೇಟಿಯಾದ ಸಹಪಾಠಿಗಳು, ತಮಗೆ ಪಾಠ ಹೇಳಿಕೊಟ್ಟ ಗುರುಗಳ ಎದುರಿನಲ್ಲಿ ಮತ್ತೆ ವಿದ್ಯಾರ್ಥಿಗಳಾಗಿ ವಿನಮ್ರತೆ ಮೆರೆದರು. ಪುಷ್ಪವೃಷ್ಟಿಗೈದು ಗುರುಗಳನ್ನು ಬರಮಾಡಿಕೊಂಡರು.

ಕುಂದಗೋಳ: ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಶಿಕ್ಷಣದ ಮೂಲಕ ಬೆಳಕು ಹರಿಸಿದ ಶಿಕ್ಷಕರ ಬಳಗವನ್ನು ಎರೆ(ಕಪ್ಪು)ಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ ಕಾರ್ಯಕ್ರಮದಡಿ 1994-95 ನೇ ಸಾಲಿನ ಎಸ್‌ಎಲ್‌ಸಿಎಲ್‌ಸಿ ವಿದ್ಯಾರ್ಥಿಗಳು 30 ವರ್ಷಗಳ ನಂತರ ಶಾಲಾ ಆವರಣದಲ್ಲಿ ನೆರೆದು ತಮಗೆ ಅಕ್ಷರಧಾರೆ ಎರೆದ ಗುರುಗಳನ್ನು ಗೌರವಿಸಿ ಸಂಭ್ರಮಿಸಿದರು.

ರೊಟ್ಟಿಗವಾಡ ಗ್ರಾಮದ ಜಿಇಸಿ ಜಿ.ಕೆ. ಹಿರೇಗೌಡರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹಪಾಠಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 30 ವರ್ಷಗಳ ನಂತರ ಶಾಲಾ ಆವರಣದಲ್ಲಿ ಭೇಟಿಯಾದ ಸಹಪಾಠಿಗಳು, ತಮಗೆ ಪಾಠ ಹೇಳಿಕೊಟ್ಟ ಗುರುಗಳ ಎದುರಿನಲ್ಲಿ ಮತ್ತೆ ವಿದ್ಯಾರ್ಥಿಗಳಾಗಿ ವಿನಮ್ರತೆ ಮೆರೆದರು. ಪುಷ್ಪವೃಷ್ಟಿಗೈದು ಗುರುಗಳನ್ನು ಬರಮಾಡಿಕೊಂಡರು.

ನಿವೃತ್ತ ಪ್ರಾಚಾರ್ಯ ಎ.ಎಲ್. ಪೊಲೀಸ್ ಪಾಟೀಲ ಮಾತನಾಡಿ, 1980ರ ಪ್ರಾರಂಭಿಕ ದಿನಗಳಲ್ಲಿ ಸಾರಿಗೆ ಸಂಪರ್ಕಗಳು, ವಸತಿ, ಊಟ, ಉಪಾಹಾರ ಸೌಕರ್ಯಗಳು ಇಲ್ಲದ ಕುಗ್ರಾಮ ರೊಟ್ಟಿಗವಾಡ ಗ್ರಾಮದಲ್ಲಿ ಶಿಕ್ಷಣಪ್ರೇಮಿ ಜಿ.ಎಸ್. ಪಾಟೀಲರು ಪಣತೊಟ್ಟು ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಅದರ ಫಲವಾಗಿ ರೊಟ್ಟಿಗವಾಡ, ಉಮಚಗಿ, ಕೊಂಕಣ ಕುರಹಟ್ಟಿ, ಕೊಡ್ಲಿವಾಡ, ಬರದ್ವಾಡ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಯಿತು. ಸಂಸ್ಥೆ ಪುನಃ ತನ್ನ ಹಳೆಯ ವೈಭವ ಪಡೆಯುವಂತಾಗಬೇಕು ಎಂದು ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ ಅಶೋಕ ಈರಗಾರ ಮಾತನಾಡಿ, ಈ ಗ್ರಾಮದಲ್ಲಿ ಕನ್ನಡ ಗಂಡುಮಕ್ಕಳ ಶಾಲೆ ಹಾಗೂ ಜಿ.ಕೆ. ಹಿರೇಗೌಡ್ರ ಪ್ರೌಢಶಾಲೆಗಳ ಕಾರಣದಿಂದಾಗಿ ವಿದ್ಯೆಯ ಬೆಳಕು ಹರಡಲು ಸಾಧ್ಯವಾಯಿತು. 30 ವರ್ಷಗಳ ನಂತರವೂ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿದ ಗುರುಬಳಗವನ್ನು ಮರೆಯದೇ ಶಾಲೆಗೆ ಆಹ್ವಾನಿಸಿ ಗೌರವಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಎಚ್.ಜಿ. ದುರಗಣ್ಣವರ ರಚಿಸಿದ ಹೋರಾಟಮಯ ಜೀವನ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಬಿ.ಎಚ್. ಕುಲಮಿ, ಎಚ್.ಜಿ. ದುರಗಣ್ಣವರ, ಆರ್.ಎನ್. ನರಗುಂದ, ಎ.ಎಫ್. ಈರಗಾರ, ಆರ್.ಎಸ್. ಕರದ್ಯಾಮನಗೌಡ್ರ, ಎಂ.ಎಂ. ನರಗುಂದ ಅವರನ್ನು ಸನ್ಮಾನಿಸಲಾಯಿತು.

ಅಗಲಿದ ಗುರುಚೇತನರಾದ ಕೆ.ಎಂ. ನಾಗರಳ್ಳಿ, ಎಸ್.ಎಂ. ಹಡಪದ, ಎಂ.ಕೆ. ಅಯ್ಯನಗೌಡ್ರ, ಜಿ.ವೈ. ಸಕ್ಕರನಾಯ್ಕರ ಅವರನ್ನು ಹಾಗೂ ಅಗಲಿದ ಸಹಪಾಠಿಗಳನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಎಲ್.ಡಿ. ಕರದ್ಯಾಮನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ವಿ.ಎಸ್. ಕಬನೂರ ಮಂಜುನಾಥ ಅಂಗಡಿ, ಎಂ.ಎಸ್. ಬನ್ನಿಮಟ್ಟಿ, ಬಿ.ಬಿ. ಹಿರೇಗೌಡ್ರ, ವಿ.ಎಂ. ಹಿರೇಮಠ, ಸಿ.ಜಿ. ಹಿರೇಮಠ, ಬಸನಗೌಡ ಹಿರೇಗೌಡ್ರ ಸೇರಿದಂತೆ ಹಲವರಿದ್ದರು. ಮಂಜುನಾಥ ಡೊಳ್ಳಿನ ಹಾಗೂ ಕುಬೇರಗೌಡ ಹಿರೇಗೌಡ್ರ ನಿರೂಪಿಸಿದರು. ಮಂಗಳಾ ಬನ್ನಿಮಟ್ಟಿ ವಂದಿಸಿದರು.

PREV