ಅರಸೀಕೆರೆ: ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಮತ್ತು ಸಂಸದರಾಗಿದ್ದ ಎಚ್.ವೈ. ಮೇಟಿ ಅವರ ನಿಧನದ ಹಿನ್ನೆಲೆಯಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಿ ಅವರ ಸಾರ್ವಜನಿಕ ಸೇವಾ ಪರಂಪರೆಯನ್ನು ಸ್ಮರಿಸಲಾಯಿತು. ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ವೈ. ಮೇಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಭಿವಂದನೆ ಸಲ್ಲಿಸಲಾಯಿತು.
ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಮೇಟಿ ಅವರು ಅರಣ್ಯ ಸಚಿವರಾಗಿ, ತರುವಾಯ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ಗ್ರಾಮೀಣ ಹಿನ್ನೆಲೆಯನ್ನು ಮರೆಯದೆ ಜನಪರ ರಾಜಕೀಯವನ್ನು ಅನುಸರಿಸಿದವರು ಎಂದು ಸ್ಮರಿಸಿದರು.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಎಚ್.ವೈ. ಮೇಟಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾದರು.ಅವರ ಆತ್ಮಕ್ಕೆ ಸದ್ಗತಿ, ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಸಭೆಯಲ್ಲಿ ಭಾವುಕವಾಗಿ ಸಂತಾಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಂಗಳಾಪುರ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ವಕೀಲ ಆದಿಹಳ್ಳಿ ಲೋಕೇಶ್, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ನಗರಸಭೆಯ ಮಾಜಿ ಸದಸ್ಯ ಅವಿನಾಶ್, ದರ್ಶನ್, ರಮೇಶ್, ಶೋಭಾ (ಅಹಲ್ಯಾ ಬಾಯಿ ಹೊಲ್ಕರ್ ಸಂಘ), ಕುರುಬ ಸಮಾಜದ ಮುಖಂಡರಾದ ಪುರುಷೋತ್ತಮ್, ಹರೀಶ್, ಆನಂದ್, ಚಂದ್ರಣ್ಣ, ಸಂತೋಷ್, ಕಮಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.