ಕಲಘಟಗಿ:
ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕ್ಷೇತ್ರಕ್ಕೆ ಭೇಟಿ ಸಮಸ್ಯೆ ಆಲಿಸದಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕನ್ನಡಪ್ರಭ "ನಲುಗಿದ ಕಲಘಟಗಿಗೆ ಭೇಟಿ ನೀಡದ ಲಾಡ್ " ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿರುವ ಸಚಿವರು, ಮಾಚಾಪುರದಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಹೆಂಚು ವಿತರಿಸಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಲಾಗಿಲ್ಲ. ಆದರೆ, ಗ್ರಾಮದಲ್ಲಿ ಆಗಿರುವ ಸಮಸ್ಯೆ ಅರಿತು ನೆರವು ನೀಡಿದ್ದಾರೆ ಎಂದು ಫೌಂಡೇಷನ್ ಸದಸ್ಯರು ತಿಳಿಸಿದ್ದಾರೆ. ಮಾಚಾಪುರದಲ್ಲಿ 180ಕ್ಕೂ ಅಧಿಕ ಮನೆಗಳಿಗೆ ತಲಾ 200 ಹೆಂಚು ನೀಡಲಾಗಿದೆ. ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮುರಳ್ಳಿ ಮಾತನಾಡಿ, ಕಲಘಟಗಿಯ ಜನತೆ ಕಷ್ಟ ಅನುಭವಿಸುವಾಗ ಸಚಿವ ಸಂತೋಷ ಲಾಡ್ ಅವರು ಎಂದಿಗೂ ಸುಮ್ಮನೆ ಕುಳಿತವರಲ್ಲ. ಅಧಿವೇಶನ ಇರುವುದರಿಂದ ಕ್ಷೇತ್ರಕ್ಕೆ ಬರದೆ ಹೋದರೂ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಜತೆಗೆ ಪ್ರತಿ ಮನೆಗೆ ₹6500 ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕರೆ ಹೊಲಗಳಲ್ಲಿನ ಬೆಳೆ ನಾಶವಾಗಿದ್ದು ಈಗಾಗಲೇ ಇಲಾಖೆಗಳಿಂದ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗಿದೆ. ಶೀಘ್ರವೇ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.ಗ್ರಾಮಸ್ಥ ವಾಸು ಹುಲಿಹೊಂಡ ಮಾತನಾಡಿ, ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಗ್ರಾಮದ ಹಲವು ಮನೆ, ಬೆಳೆ ನಾಶವಾಗಿದ್ದವು. ಸಚಿವರು ಹೆಂಚು ವಿತರಿಸಿರುವುದು ತುಂಬಾ ಆಸರೆಯಾಗಿದೆ ಎಂದರು.