ವಚನ ಸಾಹಿತ್ಯ ಪ್ರಸಾರಕ್ಕೆ ಹಳಕಟ್ಟಿ ಕೊಡುಗೆ ಅಪಾರ

KannadaprabhaNewsNetwork |  
Published : Jul 17, 2025, 12:31 AM IST
ಕಾರ್ಯಕ್ರಮದಲ್ಲಿ ಗೌರಕ್ಕ ಬಡಿಗಣ್ಣವರ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಅಮೂಲ್ಯವಾದ ವಚನಗಳನ್ನು ಮುದ್ರಿಸಲು ಯಾರೂ ಮುಂದೆ ಬರದೇ ಹೋದಾಗ ತಮ್ಮ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿ ವಚನ ಸಂಪುಟ ಹೊರತಂದರು.

ಗದಗ: ಕಲ್ಯಾಣ ಕ್ರಾಂತಿಯ ನಂತರ ಶರಣರಿಂದ ದೊರೆತ ತಾಳೆಗರಿ, ಹಸ್ತಪ್ರತಿ ಕಟ್ಟುಗಳು ತಲೆತಲಾಂತರದಿಂದ ಪೂಜೆಗೊಳ್ಳುತ್ತಿದ್ದವು. ಇಂತಹ ಅಮೂಲ್ಯ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಮುದ್ರಿಸಿ ವಚನ ಸಾಹಿತ್ಯ ಬೆಳಕನ್ನು ಮನೆಮನಗಳಿಗೆ ಪಸರಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶರಣ ಸಂಸ್ಕೃತಿ ಚಿಂತಕಿ ಗೌರಕ್ಕ ಬಡಿಗಣ್ಣವರ ಹೇಳಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮೂಲ್ಯವಾದ ವಚನಗಳನ್ನು ಮುದ್ರಿಸಲು ಯಾರೂ ಮುಂದೆ ಬರದೇ ಹೋದಾಗ ತಮ್ಮ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿ ವಚನ ಸಂಪುಟ ಹೊರತಂದರು. ಇವರ ಮೂಲಕ 250ಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರು. 150ಕ್ಕೂ ಹೆಚ್ಚು ಕೃತಿ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜದ ಅಭಿವೃದ್ಧಿಗಾಗಿ ದುಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.

ಶಿವಲೀಲಾ ಅಕ್ಕಿ ಮಾತನಾಡಿ, ಜಾಗತಿಕ ಸಾಹಿತ್ಯಕ್ಕೆ ವಚನ ಸಾಹಿತ್ಯ ಕನ್ನಡದ ಕೊಡುಗೆಯಾಗಿದೆ. ಇಲ್ಲಿರುವ ವಿಚಾರ ಅರಿತು ಆಚರಿಸಿದರೆ ಜೀವನ ಪಾವನವಾಗುತ್ತದೆ. ಹಳಕಟ್ಟಿ ಶರಣರು ತಮ್ಮ ಜೀವನವನ್ನೇ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.

ಈ ವೇಳೆ ಅನ್ನದಾನಿ ಹಿರೇಮಠ, ಯಲ್ಲಪ್ಪ ಹಂದ್ರಾಳ, ಬಸವರಾಜ ವಾರಿ, ರಾಜಶೇಖರ ಕರಡಿ, ವೀಣಾ ತಡಸದ, ಸುರೇಶ ಕುಂಬಾರ, ರತ್ನಕ್ಕ ಪಾಟೀಲ, ಬಿ.ಎಸ್. ಹಿಂಡಿ, ಎಂ.ಎಫ್. ಡೋಣಿ, ಲಿಂಗರಾಜ ಪಾಟೀಲ, ಅಶೋಕ ಹಾದಿ, ಜಿ.ಎ. ಪಾಟೀಲ, ಚನ್ನಬಸಪ್ಪ ಅಂಗಡಿ, ಸಿ.ಎಂ. ಮಾರನಬಸರಿ, ಶಶಿಕಾಂತ ಕೊರ್ಲಹಳ್ಳಿ, ಸುರೇಶ ಅಂಗಡಿ, ಎಚ್.ಡಿ. ಕುರಿ, ಶೇಖರಪ್ಪ ಕಳಸಾಪೂರಶೆಟ್ರ, ಶಕುಂತಲಾ ಗಿಡ್ನಂದಿ, ಬೂದಪ್ಪ ಅಂಗಡಿ, ಶಾಂತಲಾ ಹಂಚಿನಾಳ, ರತ್ನಾ ಪುರಂತರ, ರಾಜೇಶ್ವರ ಬಡ್ನಿ, ಉಮಾದೇವಿ ಕಣವಿ, ಪಾರ್ವತಿ ಮುಗಳಿ ಮೊದಲಾದವರು ಇದ್ದರು.

ಡಾ. ಫ.ಗು. ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗೌರವ ಕಾರ್ಯದರ್ಶಿ ಡಾ. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ನಾಯಕ ನಿರೂಪಿಸಿದರು. ರಾಹುಲ್‌ ಗಿಡ್ನಂದಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''