ರಾಯಚೂರು: ಹಾಲುಮತ ಸಮಾಜದ ಬಾಂಧವರು ಜಾಗೃತಗೊಂಡು ಸಂಘಟಿತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕನಕದಾಸರ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕನಕದಾಸರು ಓರ್ವ ಮಹಾನ್ ಹರಿದಾಸ, ಸಂತ ಹಾಗೂ ತತ್ವಜ್ಞಾನಿಯಾಗಿದ್ದಾರೆ. ಕರ್ನಾಟಕದ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕನಕದಾಸರ ಕೀರ್ತನೆಗಳು ಸಮಸಮಾಜದ ಕನಸನ್ನು ಬಿತ್ತುತ್ತವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಫೂರ್ತಿಯಾಗಿದೆ ಎಂದರು.
ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ, ಹಾಲುಮತ ಸಮಾಜವು ದೊಡ್ಡ ಸಮಾಜವಾಗಿದೆ. ಈ ಸಮಾಜಕ್ಕೆ ದೊಡ್ಡ ಶಕ್ತಿಯಿದೆ ಎಂದರು. ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ಇದಕ್ಕಾಗಿ ಅಗತ್ಯ ಅನುದಾನ ಸಹ ನೀಡಲಾಗುತ್ತದೆ ಎಂದರು.ಕಾರ್ಯಕ್ರಮವನ್ನು ಶಾಸಕ ಬಸನಗೌಡ ದದ್ದಲ್ ಉದ್ಘಾಟಿಸಿದರು. ಡಿಸಿ ನಿತೀಶ್ ಕೆ. ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಾಣೇಶ್ ಕುಲಕರ್ಣಿ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಠಮಾರಿ ಶಿವಾನಂದ ಮಠದ ಶ್ರೀಜ್ಞಾನನಂದ ಮಹಾರಾಜ, ತುರ್ವಿಹಾಳ ಗುರು ಅಮೋಘಸಿದ್ದೇಶ್ವರ ಮಠದ ಮಾದಯ್ಯಸ್ವಾಮಿ, ಲಕ್ಷ್ಮಣ ತಾತಾ, ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಸೇರಿ ಕುರುಬ ಸಮಾಜದ ಹಿರಿಯ-ಕಿರಿಯ ಮುಖಂಡರು,ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ಅನೇಕರು ಇದ್ದರು. ಮೆರವಣಿಗೆಗೆ ಸಚಿವ ಬೋಸರಾಜ್ ಚಾಲನೆ
ರಾಯಚೂರು ನಗರದಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಪ್ರಯುಕ್ತ ಕನಕದಾಸರ ವೃತ್ತದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಅಲ್ಲಿನ ಕನಕದಾಸರ ಪುತ್ಥಳಿಗೆ ಸಚಿವರು, ಶಾಸಕರು, ಎಂಎಲ್ಸಿ, ಕುರುಬ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.ನಂತರ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು. ಗಂಜ್ ಸರ್ಕಲ್ ಹತ್ತಿರದ ಕನಕದಾಸರವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ರಂಗಮಂದಿರಕ್ಕೆ ಬಂದು ತಲುಪಿತು.