ಹಂಪಿ ಉತ್ಸವ: ಭರದಿಂದ ಸಾಗಿರುವ ವೇದಿಕೆ ನಿರ್ಮಾಣ ಕಾರ್ಯ

KannadaprabhaNewsNetwork |  
Published : Feb 17, 2025, 12:33 AM IST
16ಎಚ್‌ಪಿಟಿ2- ಹಂಪಿಯ ಗಾಯತ್ರಿಪೀಠದ ಬಳಿ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. | Kannada Prabha

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಪ್ರಧಾನ ವೇದಿಕೆ ಹಾಗೂ ಎರಡನೇ ಸಮನಾಂತರ ವೇದಿಕೆ ಕಾರ್ಯವೂ ಆರಂಭಿಸಲಾಗಿದೆ.

ಹಂಪಿ ಉತ್ಸವ ಫೆಬ್ರವರಿ 28 ಮತ್ತು ಮಾರ್ಚ್‌ 1 ಮತ್ತು 2ರಂದು ನಡೆಯಲಿದ್ದು, ಉತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಜಯನಗರ ಜಿಲ್ಲಾಡಳಿತ ಈಗಾಗಲೇ ಬೆಂಗಳೂರಿನ ಉಡುಪಾಸ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ ವೇದಿಕೆ ನಿರ್ಮಾಣ ಕಾರ್ಯದ ಹೊಣೆ ವಹಿಸಿದ್ದು, ಹಂಪಿಯ ಪ್ರಕಾಶ್‌ನಗರದ ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಸಾಗಿದೆ. ಈ ವೇದಿಕೆಗೆ ಹಂಪಿ ಉತ್ಸವದ ರೂವಾರಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಹೆಸರಿನಲ್ಲಿಡಲಾಗುತ್ತಿದೆ. ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಈ ವೇದಿಕೆ ನಿರ್ಮಿಸಲಾಗುತ್ತಿದೆ.

70 ಸಾವಿರ ಕುರ್ಚಿಗಳು:

ಹಂಪಿ ಉತ್ಸವಕ್ಕಾಗಿ ಪ್ರಧಾನ ವೇದಿಕೆಯ ಮುಭಾಂಗದಲ್ಲಿ 70 ಸಾವಿರ ಕುರ್ಚಿಗಳನ್ನು ಅಳವಡಿಸಲಾಗುತ್ತಿದೆ. ಈ 70 ಸಾವಿರ ಆಸನಗಳಲ್ಲಿ ಸಾರ್ವಜನಿಕರು, ಗಣ್ಯಾತಿಗಣ್ಯರು, ಗಣ್ಯರು ಆಗಮಿಸಿ ಮೂರು ದಿನಗಳ ಉತ್ಸವ ವೀಕ್ಷಣೆ ಮಾಡಲಿದ್ದಾರೆ. ಈ ಬಾರಿ ಹಂಪಿ ಉತ್ಸವದ ವೀಕ್ಷಣೆಗೆ ಜನರು ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಉತ್ಸವಕ್ಕೆ ಭರದ ಸಿದ್ಧತೆಯೂ ನಡೆದಿದೆ.

ಉತ್ಸವದಲ್ಲಿ ಹೆಸರಾಂತ ಕಲಾವಿದರು ಆಗಮಿಸುವ ಹಿನ್ನೆಲೆಯಲ್ಲಿ ಸಂಗೀತಪ್ರಿಯರು, ಸಿನಿ ಕಲಾವಿದರ ಅಭಿಮಾನಿಗಳು ಉತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಎಣಿಕೆ ಹಾಕಲಾಗಿದೆ. ಈ ಉತ್ಸವ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರಲಿದೆ. ಹಾಗಾಗಿ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬರುವ ಸಾಧ್ಯತೆ ಇದೆ.

ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಎರಡನೇ ಸಮನಾಂತರ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ವಿಜಯನಗರ ಅರಸರ ಕಾಲದ ಈ ಶಾಶ್ವತ ವೇದಿಕೆಯ ಮುಭಾಂಗ 10 ಸಾವಿರ ಕುರ್ಚಿಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೇ ಈ ವೇದಿಕೆ ಸರಿಹೊಂದುವಂತೆ ಲೈಟಿಂಗ್‌ ಕಲ್ಪಿಸಲಾಗುತ್ತಿದೆ.

ಹಂಪಿ ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸಲಿದ್ದಾರೆ. ಕಲಾವಿದರ ದಂಡೇ ಉತ್ಸವ ವೀಕ್ಷಣೆಗೆ ಆಗಮಿಸುವ ಹಿನ್ನೆಲೆಯಲ್ಲಿ ಈ ಉತ್ಸವ ಜನರನ್ನು ಸೆಳೆಯಲಾರಂಭಿಸಿದೆ.

ಈ ಮಧ್ಯೆ ಈ ಬಾರಿ ಯೋಗಕ್ಕೆ ಆದ್ಯತೆ ನೀಡಲು, ಹಂಪಿಯ ವಿಜಯ ವಿಠಲ ದೇವಾಲಯದ ಆವರಣದಲ್ಲಿ ಯೋಗಪಟುಗಳು ಯೋಗಾಸ ಮಾಡಲು ಅವಕಾಶ ಕೂಡ ನೀಡಲಾಗುತ್ತಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಉತ್ಸವ ಗಮನ ಸೆಳೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!