ಹಂಪಿ ಉತ್ಸವ: ಕಲ್ಲಿನ ತೇರಿನ ಬಳಿ ಯೋಗಾಸನ

KannadaprabhaNewsNetwork |  
Published : Feb 23, 2025, 12:32 AM IST
22ಎಚ್‌ಪಿಟಿ1- ಹಂಪಿಯ ಕಮಲ ಮಹಲ್‌ ಸ್ಮಾರಕದ ಬಳಿ ಯೋಗಾಸನ ಮಾಡುತ್ತಿರುವ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಎಸ್ಪಿ ಶ್ರೀಹರಿಬಾಬು. | Kannada Prabha

ಸಾರಾಂಶ

ಹಂಪಿ ಉತ್ಸವದಲ್ಲಿ ನಡೆಯಲಿರುವ ಯೋಗಾಸನದಲ್ಲಿ 500 ಜನರು ಭಾಗವಹಿಸುವ ನಿರೀಕ್ಷೆ ಇದೆ

ಹೊಸಪೇಟೆ: ಹಂಪಿ ಉತ್ಸವದ ನಿಮಿತ್ತ ಮಾರ್ಚ್‌ 1 ರ ಬೆಳಗ್ಗೆ 7 ಗಂಟೆಗೆ ವಿಜಯ ವಿಠಲ ದೇವಸ್ಥಾನದ ಆವರಣದ ಕಲ್ಲಿನ ತೇರಿನ ಬಳಿ ಯೋಗಾಸನ ನಡೆಯಲಿದೆ.

ಹರಿಹರದ ಪಂಚಮಸಾಲಿ ಪೀಠಾಧಿಪತಿ ಹಾಗೂ ಯೋಗಗುರು ಶ್ರೀವಚನಾನಂದ ಶ್ರೀಗಳ ನೇತೃತ್ವದಲ್ಲಿ ಯೋಗಾಸನ ನಡೆಯಲಿದ್ದು, ಹಂಪಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಯೋಗಾಸನ ನಡೆಯಲಿದೆ. ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್‌ ಆರ್ಯ ಮತ್ತಿತರರು ಭಾಗವಹಿಸಲಿದ್ದಾರೆ.

ಹಂಪಿ ಉತ್ಸವದಲ್ಲಿ ನಡೆಯಲಿರುವ ಯೋಗಾಸನದಲ್ಲಿ 500 ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿ ಯೋಗಾಸನ ನಡೆಸುವ ಮೂಲಕ ಯುವ ಸಮೂಹಕ್ಕೆ ಯೋಗದ ಮಹತ್ವ ಸಾರುವ ಯೋಜನೆ ಜಿಲ್ಲಾಡಳಿತ ರೂಪಿಸಿದೆ.

ಯೋಗದ ಮಹತ್ವ ಸಾರುವ ಕಾರ್ಯ:ಫೆ. 28, ಮಾ.1ಮತ್ತು 2ರಂದು ಹಂಪಿ ಉತ್ಸವ ನಡೆಯಲಿದ್ದು, ಈಗಾಗಲೇ ಐದು ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೆಡೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ 12 ಕಿರು ವೇದಿಕೆಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಉತ್ಸವದ ನಿಮಿತ್ತ ಶ್ವಾನ, ಟಗರು, ಎತ್ತುಗಳ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಹಂಪಿ ಬೈ ಸ್ಕೈ ಸೇರಿದಂತೆ ವಿವಿಧ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ಹಂಪಿ ಉತ್ಸವದಲ್ಲಿ ಯೋಗಾಸನ ನಡೆಸುವ ಮೂಲಕ ಯುನೆಸ್ಕೊ ಪ್ರದೇಶದಲ್ಲಿ ವಿಶ್ವ ಮಾನ್ಯತೆ ಪಡೆದಿರುವ ಯೋಗ ಮಾಡುವ ಮೂಲಕ ಇಡೀ ಜಗತ್ತಿಗೆ ಯೋಗದ ಮಹತ್ವ ಸಾರುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ವಚನಾನಂದಶ್ರೀಗಳು ಹಂಪಿಯಲ್ಲಿ ಯೋಗಾಸನ ಮಾಡುವ ಮೂಲಕ ವಿಶ್ವದ ಮಹತ್ವ ಸಾರಿದ್ದರು. ಈಗ ಮತ್ತೊಮ್ಮೆ ಈ ಪ್ರಯತ್ನ ಮಾಡಲಾಗುತ್ತಿದೆ.

ವಿದೇಶಿ ಪ್ರವಾಸಿಗರು ಭಾಗಿ:ಹಂಪಿ ಉತ್ಸವದ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಾರೆ. ಯೋಗಾಸನದಲ್ಲಿ ವಿದೇಶಿ ಪ್ರವಾಸಿಗರಿಗೂ ಆಹ್ವಾನ ನೀಡುವ ಕೆಲಸ ಜಿಲ್ಲಾಡಳಿತ ಮಾಡಲಿದೆ. ಈಗಾಗಲೇ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರ ಜತೆಗೂ ಚರ್ಚಿಸಲಾಗಿದೆ. ವಿದೇಶಿ ಪ್ರವಾಸಿಗರು ಕೂಡ ಯೋಗದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಹಂಪಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ವಿಜಯನಗರದ ಗತವೈಭವ ಸಾರುವ ಉತ್ಸವದಲ್ಲಿ ಕಲೆ, ಸಾಹಿತ್ಯದೊಂದಿಗೆ ವಿಶ್ವಮಾನ್ಯತೆ ಪಡೆದಿರುವ ಯೋಗಾಸನಕ್ಕೂ ವೇದಿಕೆ ಕಲ್ಪಿಸಲಾಗುತ್ತಿದೆ.

ಈಗಾಗಲೇ ಪತಂಜಲಿ ಸಮಿತಿ, ಹಂಪಿಯ ರಂಜು ಆರ್ಟ್ಸ್‌ ಯೋಗಪಟುಗಳ ಜತೆಗೂ ಚರ್ಚಿಸಲಾಗಿದೆ. ಹಂಪಿ ಉತ್ಸವದಲ್ಲಿ ಯೋಗಪಟುಗಳಿಗೂ ಅವಕಾಶ ನೀಡಿ ಗುರುತಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಈಗಾಗಲೇ ಯೋಗಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಪಿ ಉತ್ಸವದಲ್ಲಿ ಯೋಗ ನಡೆಸುವುದರ ಬಗ್ಗೆ ವೈರಲ್‌ ಮಾಡುತ್ತಿದ್ದಾರೆ.

ಹಂಪಿಯ ಸ್ಮಾರಕಗಳ ಬಳಿ ಕಲ್ಲುಬಂಡೆಗಳ ಮೇಲೆ ಯೋಗ ಮಾಡುತ್ತಿದ್ದ ಯೋಗಪಟುಗಳು ಕೂಡ ಉತ್ಸವದ ವೇಳೆ ಕಲ್ಲಿನ ತೇರಿನ ಬಳಿ ಯೋಗ ಮಾಡಲಿದ್ದಾರೆ. ಆಯುಷ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಕೂಡ ಕೈಜೋಡಿಸಲಿದ್ದು, ಯೋಗಾಸನಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.

ಹಂಪಿ ಉತ್ಸವದ ನಿಮಿತ್ತ ಈ ಬಾರಿ ವಿಜಯವಿಠಲ ದೇವಾಲಯದ ಆವರಣದ ಕಲ್ಲಿನ ತೇರಿನ ಬಳಿ ಯೋಗಾಸನ ನಡೆಸಲಾಗುವುದು. ಮಾರ್ಚ್‌ 1ರ ಬೆಳಗ್ಗೆ 7 ಗಂಟೆಗೆ ಯೋಗಾಸನ ನಡೆಯಲಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''