ಹೊಸಪೇಟೆ: ಕಳೆದ ಎರಡು ದಿನಗಳಿಂದ ಹೊಸಪೇಟೆ, ಹಂಪಿ ಭಾಗದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣಗೊಂಡಿದೆ. ತುಂತುರು ಮಳೆ ಸುರಿಯುತ್ತಿದ್ದು, ಬಿಸಿಲುನಾಡಿನಲ್ಲೂ ಆಹ್ಲಾದಕರ ವಾತಾವರಣ ನೆಲೆಸಿದೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ಸಾಲು ಮಂಟಪ, ಬಸವಣ್ಣ ಮಂಟಪ, ಕಡಲೆಕಾಳು ಗಣೇಶ ಮಂಟಪ, ಸಾಸಿವೆ ಕಾಳು ಗಣಪ, ಶ್ರೀಕೃಷ್ಣ ದೇವಾಲಯ, ಕೃಷ್ಣ ಬಜಾರ್, ಬಡವಿ ಲಿಂಗ, ಉಗ್ರ ನರಸಿಂಹ, ರಾಣಿ ಸ್ನಾನಗೃಹ, ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ರಾಜರ ತುಲಾಭಾರ, ಅಚ್ಯುತರಾಜ ದೇವಾಲಯ, ವರಾಹ ದೇವಾಲಯ, ಕುದುರೆಗೊಂಬೆ ಮಂಟಪ, ಗೆಜ್ಜಲ ಮಂಟಪ, ಮಾಲ್ಯವಂತ ರಘುನಾಥ ದೇವಾಲಯ, ಪಟ್ಟಾಭಿರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕ, ಮಂಟಪಗಳನ್ನು ಮಳೆಯಲ್ಲೇ ದೇಶ, ವಿದೇಶಿ ಪ್ರವಾಸಿಗರು ವೀಕ್ಷಿಸಿದರು.
ಇನ್ನು ಹೊಸಪೇಟೆ ಭಾಗದಲ್ಲೂ ತುಂತುರು ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಒಮ್ಮೆಲೇ ಏರುಪೇರಾಗಿದೆ. ಈ ಮೊದಲು ತಂಪು ಪಾನೀಯಗಳಿಗೆ ನಗರದಲ್ಲಿ ಭಾರೀ ಬೇಡಿಕೆ ಇತ್ತು. ಈಗ ಐಸ್ಕ್ರೀಂ, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪು ಪಾನೀಯಗಳಿಂದ ಜನ ದೂರ ಸರಿಯುತ್ತಿದ್ದಾರೆ. ಮಳೆಗಾಲದಲ್ಲಿ ಚಳಿಗಾಲದ ವಾತಾವರಣ ಸೃಷ್ಟಿಯಾಗಿರುವುದರಿಂದ ಜನರು ಕೂಡ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ. ಮಲೆನಾಡಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದು, ಏಪ್ರಿಲ್, ಮೇ ತಿಂಗಳಿನ ಭಾರೀ ಬಿಸಿಲನ್ನು ನೆನಪಿಸಿಕೊಂಡು ಚರ್ಚಿಸುತ್ತಿದ್ದಾರೆ. ಇಂತಹದ್ದೇ ವಾತಾವರಣ ನೆಲೆಗೊಳ್ಳಲಿ ಎಂದು ಬಯಸುತ್ತಿದ್ದಾರೆ.