ಎಲ್ಲ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ: ಕಲ್ಮರುಡಪ್ಪ

KannadaprabhaNewsNetwork | Published : Dec 18, 2024 12:49 AM

ಸಾರಾಂಶ

ಮುಡಾ, ವಾಲ್ಮೀಕಿ, ಅಬಕಾರಿ ಇಲಾಖೆ ಸೇರಿದಂತೆ ವಿವಿಧೆಡೆ ನಡೆದಿರುವ ಎಲ್ಲ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ಮುಡಾ, ವಾಲ್ಮೀಕಿ, ಅಬಕಾರಿ ಇಲಾಖೆ ಸೇರಿದಂತೆ ವಿವಿಧೆಡೆ ನಡೆದಿರುವ ಎಲ್ಲ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಕ್ಫ್‌ ಆಸ್ತಿ ಅಕ್ರಮದ ವರದಿಯನ್ನು ಮುಚ್ಚಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ₹150 ಕೋಟಿ ಆಮಿಷವೊಡ್ಡಿದ್ದಾಗಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಹೇಳಿದ್ದಾರೆಂದು ಸಚಿವ ಪ್ರಿಯಾಂಕ ಖರ್ಗೆ ಅವರು ಆರೋಪ ಮಾಡಿದ್ದಾರೆ. ನಿಮ್ಮ ಬಳಿ ನಿಜವಾಗಲೂ ಸಾಕ್ಷ್ಯಾಧಾರಗಳಿದ್ದರೆ, ಖಚಿತ ಮಾಹಿತಿ ಇದ್ದರೆ ನೀವು ಮತ್ತು ಮುಖ್ಯಮಂತ್ರಿ ಸೇರಿ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಬಿಜೆಪಿಯ ರಾಜ್ಯಾಧ್ಯಕ್ಷ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿದ್ದಾರೆ. ಅದಕ್ಕೆ ಹೆದರಿ ಪ್ರಿಯಾಂಕ ಖರ್ಗೆ ಹಾಗೂ ಮುಖ್ಯಮಂತ್ರಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಯಾವ ಉದ್ದೇಶಕ್ಕಾಗಿ ಅವರಿಗೆ ಆಮಿಷ ಒಡ್ಡುತ್ತಾರೆ ? ಅವರ ಪಾತ್ರ ಏನಿದೆ ? ಈ ಹಿಂದೆ ಕಾಂಗ್ರೆಸ್ಸಿಗರು ವಕ್ಫ್‌ ಆಸ್ತಿಯನ್ನು ಕಬಳಿಸಿದ್ದಾರೆಂದು ವರದಿ ನೀಡುತ್ತಾರೆ. ನೀವು ಎರಡು ಬಾರಿ ಮುಖ್ಯಮಂತ್ರಿಯಾದವರು ಈ ವರದಿಯನ್ನು ತನಿಖೆಗೆ ಒಳಪಡಿಸಿಲ್ಲ. ಈ ವರದಿಯನ್ನು ಸಿಬಿಐಗೆ ಕೊಡಿ. ಇಲ್ಲದಿದ್ದರೆ ಜನ ನಿಮ್ಮನ್ನು ಒಬ್ಬ ಭ್ರಷ್ಟ ಮುಖ್ಯಮಂತ್ರಿ ಮತ್ತು ಪುಕ್ಕಲು ಮುಖ್ಯಮಂತ್ರಿಯಾಗಿ ನೋಡಲಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಅಭಿವೃದ್ಧಿಗೆ ಶೂನ್ಯ ಕೊಡುಗೆ ಕೊಟ್ಟಿರುವ ನೀವು, ಸದನವನ್ನು ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬಳಸದೇ ಕರ್ನಾಟಕ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದರ ಮುಖಾಂತರ ಕಲಾಪವನ್ನು ಹಾಳು ಮಾಡುತ್ತಿದ್ದೀರಿ ಎಂದು ಹೇಳಿದರು. ಮುಡಾ ಹಗರಣ, ವಾಲ್ಮೀಕಿ, ಅಬಕಾರಿ ಇಲಾಖೆಯಲ್ಲಿ ನಡೆದಿರುವ ಹಗರಣ ಮತ್ತು ಪ್ರಿಯಾಂಕ ಖರ್ಗೆ ಅವರು ಆರೋಪ ಸಾಬೀತಾದ ತಕ್ಷಣ ಬೆಲೆ ಬಾಳುವ 5ಎಕರೆ ಜಮೀನನ್ನು ಏಕಾಏಕಿ ವಾಪಸ್‌ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಕೋವಿಡ್ ಹಗರಣ ಇದನ್ನು ಕೂಡ ಸಿಬಿಗೆ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಬಿಜೆಪಿ ನಗರ ಅಧ್ಯಕ್ಷ ಪುಷ್ಪರಾಜ್, ಗ್ರಾಮಾಂತರ ಅಧ್ಯಕ್ಷ ಮಹೇಶ್‌, ಮುಖಂಡರಾದ ಕೇಶವ್, ಸಚಿನ್ ಉಪಸ್ಥಿತರಿದ್ದರು.

Share this article