ಹನುಮ ಧ್ವಜ ಪ್ರಕರಣ: ಎರಡು ಶಾಂತಿಸಭೆಗಳು ‘ವಿಫಲ’...!

KannadaprabhaNewsNetwork |  
Published : Feb 04, 2024, 01:41 AM IST
೩ಕೆಎಂಎನ್‌ಡಿ-೫ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಕೆರಗೋಡು ಗ್ರಾಮಸ್ಥರೊಂದಿಗೆ ಶಾಂತಿಸಭೆ ನಡೆಸಿದರು. | Kannada Prabha

ಸಾರಾಂಶ

ಕೇಸರಿ ಧ್ವಜ ಹಾರಿಸಲೇಬೇಕೆಂದಿದ್ದರೆ ಖಾಸಗಿ ಜಾಗದಲ್ಲಿ ಆರಿಸಿಕೊಳ್ಳಿ. ಅದಕ್ಕೆ ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಧ್ವಜ ವಿವಾದದಿಂದ ಕೆರಗೋಡು ಗ್ರಾಮದಲ್ಲಿ ನೆಲೆಸಿದ್ದ ಶಾಂತಿಗೆ ಧಕ್ಕೆಯಾಗಿದೆ. ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗಿದೆ. ಎಲ್ಲ ವರ್ಗದ ಜನರು ಶಾಂತಿ-ಸಹಬಾಳ್ವೆಯಿಂದ ಜೀವನ ನಡೆಸುವ ಅವಶ್ಯಕತೆ ಇದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕೋರಿಕೆ.

ಕನ್ನಡಪ್ರಭ ವಾರ್ತೆ ಮಂಡ್ಯಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರೊಂದಿಗೆ ನಡೆಸಲಾದ ಎರಡು ಶಾಂತಿ ಸಭೆಗಳು ವಿಫಲಗೊಂಡಿವೆ. ರಾಷ್ಟ್ರೀಯ ಹಬ್ಬ, ಕನ್ನಡ ರಾಜ್ಯೋತ್ಸವ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ಉಂಟುಮಾಡಿದೆ.

ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಕೆರಗೋಡು ಗ್ರಾಮದಲ್ಲಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಗ್ರಾಮದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಧ್ವಜಸ್ತಂಭವಿರುವ ಜಾಗ ಗ್ರಾಪಂ ಪಂಚಾಯಿತಿಗೆ ಸೇರಿದ್ದಾಗಿದೆ. ಅಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಕ್ಕೆ ಬಿಟ್ಟು ಬೇರೆ ಧ್ವಜ ಹಾರಾಟಕ್ಕೆ ಅನುಮತಿ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಗ್ರಾಮಸ್ಥರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.

ಕೇಸರಿ ಧ್ವಜ ಹಾರಿಸಲೇಬೇಕೆಂದಿದ್ದರೆ ಖಾಸಗಿ ಜಾಗದಲ್ಲಿ ಆರಿಸಿಕೊಳ್ಳಿ. ಅದಕ್ಕೆ ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಧ್ವಜ ವಿವಾದದಿಂದ ಗ್ರಾಮದಲ್ಲಿ ನೆಲೆಸಿದ್ದ ಶಾಂತಿಗೆ ಧಕ್ಕೆಯಾಗಿದೆ. ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗಿದೆ. ಎಲ್ಲ ವರ್ಗದ ಜನರು ಶಾಂತಿ-ಸಹಬಾಳ್ವೆಯಿಂದ ಜೀವನ ನಡೆಸುವ ಅವಶ್ಯಕತೆ ಇದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಜಿಲ್ಲಾಧಿಕಾರಿ ಮನವೊಲಿಕೆಗೆ ಒಪ್ಪದ ಗ್ರಾಮಸ್ಥರು, ನಮಗೆ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜದ ಮೇಲೂ ಅಪಾರ ಗೌರವ, ಅಭಿಮಾನಗಳಿವೆ. ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬದ ದಿನಗಳಂದು ಹನುಮ ಧ್ವಜವನ್ನು ಇಳಿಸಿ ಆ ಧ್ವಜಗಳನ್ನು ಆರೋಹಣ ಮಾಡುವುದಕ್ಕೆ ನಾವು ಯಾವ ಅಡ್ಡಿ ಮಾಡುವುದಿಲ್ಲ. ಆದರೆ, ಉಳಿದ ದಿನಗಳಲ್ಲಿ ಹನುಮಧ್ವಜ ಹಾರಾಟಕ್ಕೆ ಅನುಮತಿ ಕೊಡಿ. ಬೇರೆ ಜಾಗದಲ್ಲೆಲ್ಲೋ ನಾವು ಹನುಮ ಧ್ವಜ ಹಾರಿಸುವುದಕ್ಕೆ ನಾವು ಸಿದ್ಧರಿಲ್ಲ. ಈಗಿರುವ ಧ್ವಜಸ್ತಂಭದಲ್ಲೇ ಧ್ವಜ ಹಾರಾಡಬೇಕೆಂಬುದು ನಮ್ಮ ತೀರ್ಮಾನ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.

ಶಾಂತಿಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಹಾಜರಿದ್ದರು.

ಆನಂತರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾಪಗೊಂಡು ಆಗಲೂ ಗ್ರಾಮ ಸ್ಥರು ಒಪ್ಪದೆ ವಾಪಸಾದರು. ಇದರಿಂದ ಎರಡು ಶಾಂತಿಸಭೆಗಳು ವಿಫಲವಾಗಿವೆ.

PREV

Recommended Stories

ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ
ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ