ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಪ್ರಾಚೀನ ಆಂಜನೇಯನ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಧಾರ್ಮಿಕ ಆಚರಣೆಗಳು ದೇವಾಲಯದ ಸಂಪ್ರದಾಯದಂತೆ ನಡೆಯಿತು. ಬಾನಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಇತ್ತ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳಿಗೆ ಚಾಲನೆ ದೊರೆಯಿತು. ಕ್ಷೀರಾಭೀಷೇಕ , ಜಲಾಭೀಷೇಕ ಹಾಗೂ ಹೀಗೆ ನಾನಾ ಅಭಿಷೇಕಗಳು ನಡೆದವು. ನಂತರ ಕುಂಕುಮಾರ್ಚನೆ ಬಳಿಕ ಆಂಜನೇಯನೇಯನ ಮೂಲ ವಿಗ್ರಹಕ್ಕೆ ಮುತ್ತುಗಳಿಂದ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು.
ಮುಂಜಾನೆಯಿಂದ ತಡರಾತ್ರಿಯವರೆಗೂ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಭಜರಂಗಿಯ ದರ್ಶನ ಪಡೆದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ವತಿಯಿಂದ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಹಾಮಂಗಳಾರತಿಯ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳೂ ಆದ ತಹಸೀಲ್ದಾರ್ , ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ದೇವಾಲಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಉಪಸ್ಥಿತರಿದ್ದರು.ಸಂಜೆ ೬.೩೦ಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಕೊಳಲು ಗಾನ ಕಲಾ ಶ್ರೀ ವಿದ್ವಾನ್ ಎಲ್ ವಿ ಮುಕುಂದ ಮತ್ತು ಸಂಘಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಲಿ ಸದಸ್ಯರುಗಳಾದ ರೈಲ್ವೆ ರಂಗಣ್ಣ ,ಕೆ.ಆರ್ ಶ್ರೀಧರ್ ,ಕದಂಬ ಶ್ರೀನಿವಾಸ್, ನೇವರ್ತಿರಾವ್ ಜಾಧವ್, ಎ.ಟಿ.ರೇಣುಕುಮಾರ್, ಲಕ್ಷೀ ಎ.ಟಿ.ಗೋವಿಂದರಾಜು, ತೇಜಸ್ವಿನಿ eಚ್.ಜಾಧವ್ ಇದ್ದರು.