-ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ
----
ಕನ್ನಡಪ್ರಭ ವಾರ್ತೆ ಯಾದಗಿರಿಪ್ರತಿಯೊಬ್ಬ ಮನುಷ್ಯ ಧರ್ಮಮಾರ್ಗದಲ್ಲಿ ಮುನ್ನಡೆದಾಗ ಭವಿಷ್ಯದಲ್ಲಿ ಸುಖ ಪ್ರಾಪ್ತಿಯಾಗುತ್ತದೆಂದು ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ನುಡಿದರು.
ಧರ್ಮ ಅಮೃತ ಸಮಾನವಾಗಿರುತ್ತದೆ. ಧರ್ಮವನ್ನು ಸೇವಿಸಿದವರಿಗೆ ಒಳ್ಳೆಯದಾಗುತ್ತದೆ. ಬಾಹ್ಯ ಆಚರಣೆಗಳು ಧರ್ಮದ ಒಂದು ಭಾಗ ಮಾತ್ರ. ಆದರೆ, ಆ ಆಚರಣೆಗಳು ಪರಿಪೂರ್ಣವಲ್ಲ. ಮನುಷ್ಯ ನೈತಿಕತೆಯ ನೆಲೆಗಟ್ಟಿನ ಮೇಲೆ ಮಾನವಾಂತಕರುಣೆಯನ್ನು ರೂಢಿಸಿಕೊಂಡು ಬದುಕಬೇಕು. ಆಗಲೇ ಮಾನವ ಧರ್ಮ ಅರಿಯಲು ಸಾಧ್ಯವಾಗುತ್ತದೆಂದು ಹೇಳಿದರು.
ಮಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ವರ್ತಮಾನದ ವ್ಯವಸ್ಥೆಯಲ್ಲಿ ಜಾತಿಗಳ ಜಂಜಾಟ, ಧರ್ಮಗಳ ತಿಕ್ಕಾಟ ವಿಪರೀತವಾಗಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಎಲ್ಲರನ್ನು ಏಕೋಭಾವದಿಂದ ಕಂಡ ವಿಶ್ವಾರಾಧ್ಯರ ಮಾನವ ಧರ್ಮ ಇಂದಿನ ದಿನಮಾನಗಳಲ್ಲಿ ಅಗತ್ಯವಿದೆಯೆಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಜ್ಯೋತಿ ಬೆಳಗಿಸಿ ಮಾನವ ಧರ್ಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭಾರತ ಉನ್ನತ ಪರಂಪರೆಯನ್ನು ಹೊಂದಿದೆ. ಸಂತ ಮಹಾಂತರು ಬಾಳಿ ಬದುಕಿ, ಈ ಭುವಿಯ ಜನತೆಯ ಬಾಳನ್ನು ಬೆಳಗಿದ್ದಾರೆ ಎಂದರು.
ನೊಣವಿನಕೇರೆಯ ಡಾ. ಕರಿವೃಷಭ ರಾಜದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು ಅನುಭಾವ ನೀಡಿ, ವಿಶ್ವಾರಾಧ್ಯರು ನಡೆದಾಡಿದ ಈ ಪುಣ್ಯಕ್ಷೇತ್ರಕ್ಕೆ ನಾವು ಬರುತ್ತಿರುವುದು ನಮಗೆ ತುಂಬಾ ಸಂತಸವುಂಟು ಮಾಡಿದೆ ಎಂದು ತಿಳಿಸಿದರು.
ತೊನಸನಹಳ್ಳಿಯ ಶ್ರೀಮಲ್ಲಣ್ಣಪ್ಪ ಶರಣರು ಅನುಭಾವ ನೀಡಿ, ವಿಶ್ವಾರಾಧ್ಯರು ತಮ್ಮ ತಪಬಲದಿಂದ ಈ ಭುವಿಯನ್ನು ಬೆಳಗಿದ ಮಹಾಂತರಾಗಿದ್ದಾರೆ. ಅವರ ದಿವ್ಯದರ್ಶನ ಪಡೆದ ಭಕ್ತವೃಂದದ ಬದುಕು ಖಂಡಿತ ಉದ್ಧಾರವಾಗುತ್ತದೆ ಎಂದು ಹೇಳಿದರು.
ಮುನೇಂದ್ರ ಶಿವಾಚಾರ್ಯರು, ಮಳಖೇಡದ ಕಾರ್ತಿಕೇಶ್ವರ ಶಿವಾಚಾರ್ಯರು, ಗೋಲಪಲ್ಲಿಯ ವರದಾನೇಶ್ವರ ಮಹಾಸ್ವಾಮಿಗಳು, ಎಲೇರಿಯ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ನಿಲೋಗಲ್ ಹಿರೇಮಠದ ಅಭಿವನ ರೇಣುಕ ಶಾಂತಮಲ್ಲ ಶಿವಾಚಾರ್ಯರು, ಶಹಾಪುರ ಕುಂಬಾರಗೇರಿ ಹಿರೇಮಠದ ಸುಗೂರೇಶ್ವರ ಶಿವಚಾರ್ಯರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಮುಖಂಡರಾದ ಗುರುಪಾಟೀಲ್ ಶಿರವಾಳ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಚನಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಭೀಮಣ್ಣ ಸಾಲಿ, ಬಸ್ಸಣ್ಣ ದೇವರಹಳ್ಳಿ, ಡಾ. ಸುಭಾಶ್ಚಂದ್ರ ಕೌಲಗಿ, ನಾಗರೆಡ್ಡಿ ಪಾಟೀಲ್ ಕರದಾಳ, ಸಿದ್ದಣ್ಣಗೌಡ ಕಾಡಂನೋರ, ಬಸ್ಸುಗೌಡ ಬಿಲ್ಹಾರ, ಡಾ. ಎಸ್.ಬಿ. ಕಾಮರೆಡ್ಡಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೋಳ, ಸಹಾಯ ಆಯುಕ್ತ ಹಂಪಣ್ಣ ಸಜ್ಜನ್, ತಹಸೀಲ್ದಾರ್ ಸುರೇಶ ಅಂಕಲಗಿ, ಬಸವರಾಜ ಶಾಸ್ರ್ತಿ, ಮಲ್ಲಿಕಾರ್ಜುನ ಶಾಸ್ರ್ತಿಇದ್ದರು.
-----5ವೈಡಿಆರ್19: ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಬನ್ನಿಬಸವ ಅನುಭವ ಮಂಟಪದ ಶರಣ ಸಕ್ರೆಪ್ಪಗೌಡ ವೇದಿಕೆಯಲ್ಲಿ ಏರ್ಪಡಿಸಿದ್ದ ಮಾನವಧರ್ಮ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.